ADVERTISEMENT

ಸರ್ಜಾಪುರ: ಬಿಎಸ್‌ಪಿಯಿಂದ ಕಾನ್ಶಿರಾಂ ಜನ್ಮದಿನ ಆಚರಣೆ

ಬಹುಜನ ಸಮಾಜ ಪಕ್ಷದಿಂದ ಸ್ವಚ್ಛತಾ ಕಾರ್ಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 7:41 IST
Last Updated 17 ಮಾರ್ಚ್ 2023, 7:41 IST
ಆನೇಕಲ್‌ ತಾಲ್ಲೂಕಿನ ಸರ್ಜಾಪುರದಲ್ಲಿ ಬಿಎಸ್‌ಪಿಯಿಂದ ಕಾನ್ಶಿರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು
ಆನೇಕಲ್‌ ತಾಲ್ಲೂಕಿನ ಸರ್ಜಾಪುರದಲ್ಲಿ ಬಿಎಸ್‌ಪಿಯಿಂದ ಕಾನ್ಶಿರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು   

ಆನೇಕಲ್: ತಾಲ್ಲೂಕಿನ ಸರ್ಜಾಪುರದಲ್ಲಿ ಬಿಎಸ್‌ಪಿಯಿಂದ ಕಾನ್ಶಿರಾಂ ಅವರ ಜನ್ಮ ದಿನವನ್ನು ಪಕ್ಷದ ಕಾರ್ಯಕರ್ತರು ಆಚರಿಸಿದರು. ಗಿಡ ನೆಡುವುದು, ಸ್ವಚ್ಛತಾ ಕಾರ್ಯ ಮತ್ತು ಮಹಿಳೆಯರಿಗೆ ಸೀರೆ ವಿತರಿಸಲಾಯಿತು.

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ವೈ. ಚಿಕ್ಕಹಾಗಡೆ ಮಾತನಾಡಿ, ಕಾನ್ಶಿರಾಂ ಶೋಷಿತರ ಧ್ವನಿಯಾಗಿದ್ದರು. ಹೋರಾಟದ ಮೂಲಕ ಸಾಮಾಜಿಕ ನ್ಯಾಯಕ್ಕೆ ಮುನ್ನುಡಿ ಬರೆದಿದ್ದರು ಎಂದು ಸ್ಮರಿಸಿದರು.

ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ಅವರ ತತ್ವ, ಸಿದ್ಧಾಂತಗಳು ಇಂದಿನ ರಾಜಕಾರಣಿಗಳಿಗೆ ದಾರಿದೀಪವಾಗಿವೆ ಎಂದರು.

ADVERTISEMENT

ಎಲ್ಲಾ ಸಮುದಾಯದ ಅಭಿವೃದ್ಧಿಯೇ ಪಕ್ಷದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಪಕ್ಷವು ಅಧಿಕಾರದ ಗದ್ದುಗೆ ಏರಬೇಕೆಂದು ಕಾನ್ಶಿರಾಂ ಬಯಸಿದ್ದರು. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಅಧಿಕಾರಕ್ಕೆ ಬಂದಿತ್ತು. ಆದರೆ, ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ ಎಂದು
ಹೇಳಿದರು.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಹಲವು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಜನಪರ ಚಿಂತನೆ ಮೂಲಕ ಬಹುಜನರ ನಡುವೆ ಬಾಂಧವ್ಯ ಮೂಡಿಸುವಲ್ಲಿ ಕೆಲಸ ಮಾಡುತ್ತಿದೆ. ಹಾಗಾಗಿ, ಮುಂಬರುವ ಚುನಾವಣೆಯಲ್ಲಿ ಬಿಎಸ್‌ಪಿಯನ್ನು ಗೆಲ್ಲಿಸಬೇಕು ಎಂದು
ಕೋರಿದರು.

ಜಿಲ್ಲಾ ಉಪಾಧ್ಯಕ್ಷ ಡಾ.ಎಚ್‌.ಎನ್‌. ಯಲ್ಲಾರೆಡ್ಡಿ ಮಾತನಾಡಿ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು ಎಲ್ಲಾ ಪಕ್ಷಗಳು ತಮ್ಮದೇ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿವೆ. ಆದರೆ, ಈ ಹೆದ್ದಾರಿಯು ಸಾರ್ವಜನಿಕರ ತೆರಿಗೆಯಿಂದ ನಿರ್ಮಿಸಲಾಗಿದೆ. ಹಾಗಾಗಿ, ಸಾರ್ವಜನಿಕರಿಗೆ ಸಲ್ಲಬೇಕಾದ ಗೌರವವಾಗಿದೆ ವಿನಾ ಪಕ್ಷಗಳಿಗಲ್ಲ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಲ್‌. ಮುನಿಯಲ್ಲಪ್ಪ, ಜಿಲ್ಲಾ ಉಪಾಧ್ಯಕ್ಷ ಗೌರಿಶಂಕರ್‌, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಟಿ.ಎಸ್‌. ಕುಮಾರಾಚಾರಿ, ತಾಲ್ಲೂಕು ಉಸ್ತುವಾರಿ ಮಾಯಸಂದ್ರ ಸಂಪಂಗಿ, ಮಹಿಳಾ ಘಟಕದ ಉಪಾಧ್ಯಕ್ಷೆ ಗಾಯತ್ರಿ, ಮುಖಂಡರಾದ ಪುಷ್ಪಲತಾ, ಗೀತಲಕ್ಷ್ಮೀ, ನೇತ್ರಾವತಿ, ವನಜಾ, ನಾಗಮಣಿ, ಪಾಪಣ್ಣ, ಗಜೇಂದ್ರ, ವೇಣು, ಕಿರಣ್‌, ಸಿಡಿ‌ಹೊಸಕೋಟೆ ಕೃಷ್ಣಮೂರ್ತಿ, ಲೋಕೇಶ್‌, ನಾರಾಯಣಪ್ಪ, ಶ್ರೀನಿವಾಸಾಚಾರಿ, ಸೋಮಶೇಖರಾಚಾರಿ, ಚಿಕ್ಕಹಾಗಡೆ ಪ್ರವೀನ್, ದಿಲೀಪ್‌, ಶಂಭಪ್ಪ, ಹರ್ಷ, ರವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.