ರಾಮನಗರ: 'ಸ್ವಪಕ್ಷೀಯರೇ ಎದುರಾಗಿ ನಿಂತರೂ ಈ ಬಾರಿಯ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ' ಎಂದು ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.
'ಪ್ರತಿ ಬಾರಿ ಚುನಾವಣೆಗೂ ಮುನ್ನ ನಮ್ಮವರೇ ಒಂದಿಬ್ಬರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೂ ಹೈಕಮಾಂಡ್ ನನಗೇ ಟಿಕೆಟ್ ನೀಡುತ್ತದೆ. ಏಳು ಬಾರಿ ಗೆದ್ದಿದ್ದೇನೆ. ಈ ಬಾರಿ ಸಹ ಗೆಲುವು ಕಷ್ಟವೇನಲ್ಲ' ಎಂದು ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
' ಟಿಕೆಟ್ ಖಾತ್ರಿಯಾದ ಬಳಿಕ ಪಕ್ಷದ ಎಲ್ಲ ಸ್ಥಳೀಯ ಮುಖಂಡರು ನನ್ನ ಪರ ಪ್ರಚಾರಕ್ಕೆ ಬರುತ್ತಿದ್ದಾರೆ. ರಮೇಶ್ ಕುಮಾರ್ ವಿಧಾನಸಭೆ ಸ್ಪೀಕರ್ ಆಗಿರುವ ಕಾರಣ ಅವರು ಪ್ರಚಾರಕ್ಕೆ ಬರಲಾಗದು. ಉಳಿದಂತೆ ಕೊತ್ತನೂರು ಮಂಜುನಾಥ್ ಮಾತ್ರ ಬಿಜೆಪಿಗೆ ಬೆಂಬಲ ನೀಡುವ ಮಾತನ್ನಾಡಿದ್ದಾರೆ. ಎಲ್ಲವೂ ಸರಿಹೋಗುತ್ತದೆ' ಎಂದರು.
' ದೇಶ ಸದ್ಯ ದೊಡ್ಡ ಗಂಡಾಂತರದಲ್ಲಿ ಇದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಶೋಷಿತರು, ಅಲ್ಪಸಂಖ್ಯಾತ ರಿಗೆ ಉಳಿಗಾಲ ಇಲ್ಲದಂತೆ ಆಗುತ್ತದೆ. ಹೀಗಾಗಿಯೇ ಜಾತ್ಯತೀತ ಮನೋಭಾವದ ಪಕ್ಷಗಳು ಈಗಾಗಲೇ ಹೊಂದಾಣಿಕೆ ಮಾಡಿಕೊಂಡಿವೆ. ತಳ ಸಮುದಾಯಗಳ ಜನರು ಮತ ಚಲಾಯಿಸುವಾಗ ಇದೆನ್ನೆಲ್ಲ ಗಮನಿಸಬೇಕು' ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.