ADVERTISEMENT

ಸರ್ಕಾರಕ್ಕೆ ಮುಟ್ಟದ ರೈತ ಹೋರಾಟ

ಮತಕ್ಕೆ ಓಡಿ ಬರುವ ರಾಜಕಾರಣಿಗಳು ಕಷ್ಟ ಕೇಳಲು ಏಕೆ ಬರಲ್ಲ?

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 5:57 IST
Last Updated 5 ಆಗಸ್ಟ್ 2025, 5:57 IST
ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಮುತ್ತಾನಲ್ಲೂರು ಗ್ರಾಮದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟವನ್ನುದ್ದೇಶಿಸಿ ರೈತ ಚಂದ್ರಶೇಖರ್ ಮಾತನಾಡಿದರು
ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಮುತ್ತಾನಲ್ಲೂರು ಗ್ರಾಮದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟವನ್ನುದ್ದೇಶಿಸಿ ರೈತ ಚಂದ್ರಶೇಖರ್ ಮಾತನಾಡಿದರು   

ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಮುತ್ತಾನಲ್ಲೂರು ಗ್ರಾಮದಲ್ಲಿ ನಡೆಯುತ್ತಿರುವ 27 ದಿನ ಪೂರೈಸಿದೆ. ಆದರೆ ತಮ್ಮ ಹೋರಾಟಕ್ಕೆ ಸರ್ಕಾರದಿಂದ ಯಾವುದೇ ಸ್ಪಂದನೆ ಇದುವರೆಗೆ ದೊರೆತಿಲ್ಲ ಎಂದು ರೈತರು ಮತ್ತು ಹೋರಾಟಗಾರರು ಬೇಸರ ಹೊರ ಹಾಕಿದ್ದಾರೆ.

ರೈತ ವಿ.ಚಂದ್ರಶೇಖರ್‌ ಮಾತನಾಡಿ, 27 ದಿನಗಳಿಂದ ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆಯಡಿಯಲ್ಲಿ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಹೋರಾಟದ ವಿಷಯ ರಾಜಕಾರಣಿಗಳಿಗೆ ಮತ್ತು ಸರ್ಕಾರಕ್ಕೆ ಮುಟ್ಟುತ್ತಿಲ್ಲ. ನಮ್ಮ ಮತ ಬೇಕೆಂದಾಗ ರಾಜಕಾರಣಿಗಳು ಓಡೋಡಿ ಬರುತ್ತಾರೆ. ಆದರೆ ನಮ್ಮ ಕಷ್ಟಗಳಿಗೆ ಸ್ಪಂದಿಸದೇ ಇರುವುದು ಖಂಡನೀಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರು ಭೂಸ್ವಾಧೀನ ವಿರೋಧಿಸಿ ಹಲವು ಹೋರಾಟಗಳು ನಡೆದಿವೆ. ದೊಮ್ಮಸಂದ್ರ ರಸ್ತೆ ತಡೆ, ಬೈಕ್‌ ರ‍್ಯಾಲಿ ಸೇರಿದಂತೆ ಹಲವಾರು ಹೋರಾಟಗಳನ್ನು ನಡೆಸಿದ್ದರೂ ಸರ್ಕಾರಕ್ಕೆ ರೈತ ಸ್ನೇಹಿ ನಿಲುವು ತಾಳದಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ರೈತರು ಉಗ್ರ ಹೋರಾಟಕ್ಕೆ ಸರ್ಕಾರವೇ ದಾರಿ ಮಾಡುತ್ತಿದೆ ಎಂದು ಎಚ್ಚರಿಸಿದರು

ADVERTISEMENT

ಸರ್ಜಾಪುರ ಹೋಬಳಿಯು ಕೃಷಿ ಭೂಮಿಯಾಗಿದೆ. ತೋಟಗಾರಿಕೆ, ಹೈನುಗಾರಿಕೆ, ರೇಷ್ಮೇ ಸಾಕಾಣಿಕೆ ಸೇರಿದಂತೆ ರೈತರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಫಲವತ್ತಾದ ಭೂಮಿಯನ್ನು ಬರಡು ಭೂಮಿ ಎಂದು ನಮೂದಿಸಿರುವ ಅಧಿಕಾರಿಯು ದಯವಿಟ್ಟು ಕಣ್ಣು ತೆರೆದು ನೋಡಬೇಕು. ತಾಲ್ಲೂಕು ಆಡಳಿತವು ಈ ಭಾಗದ ಕೃಷಿ ಭೂಮಿಯನ್ನು ಸರ್ವೇ ನಡೆಸುವ ಮೂಲಕ ವಾಸ್ತವಾಂಶವನ್ನು ಸರ್ಕಾರಕ್ಕೆ ನೀಡಬೇಕು ಎಂದರು.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ರೈತರ ಪರವಾಗಿರಬೇಕು. ಆದರೆ ಶಾಸನಗಳನ್ನು ರೂಪಿಸುವವರು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಖಂಡನೀಯ. ರೈತರ ಹೋರಾಟಕ್ಕೆ ದಿನೇ ದಿನೇ ಸಂಘಟನೆಗಳು ಮತ್ತು ಸಾರ್ವಜನಿಕರ ಬೆಂಬಲ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಹೋರಾಟದ ದಿಕ್ಕನ್ನು ಬದಲಾಯಿಸಲಾಗುವುದು. ರೈತರ ಉಗ್ರ ಹೋರಾಟಕ್ಕೆ ಮುನ್ನವೇ ಸರ್ಕಾರ ಎಚ್ಚೆತ್ತುಕೊಂಡು ಭೂಸ್ವಾಧೀನ ಪ್ರಕ್ರಿಯೆ ಹಿಂಪಡೆಯಬೇಕು ಎಂದು ಪ್ರಗತಿಪರ ರೈತ ಮಹಿಳೆ ಉಮಾ ಪರಶುರಾಮ್‌ ಒತ್ತಾಯಿಸಿದರು.

ರೈತರ ಪ್ರತಿಭಟನೆಯಲ್ಲಿ ತಾಲ್ಲೂಕಿನ ಪತ್ರಕರ್ತರು ಬೆಂಬಲ ಘೋಷಿಸಿ ಸೋಮವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಜೈ ಜವಾನ್‌ ಜೈ ಕಿಸಾನ್‌ ಘೋಷಣೆಗಳನ್ನು ಕೂಗಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಸಂಜೆ ನಡೆದ ಹೋರಾಟದಲ್ಲಿ ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಗೋಪಿನಾಥರೆಡ್ಡಿ, ಮುಖಂಡರಾದ ಬಿ.ಬಿ.ಐ.ಮುನಿರೆಡ್ಡಿ, ಕಾಡುಅಗ್ರಹಾರ ಜಯಪ್ರಕಾಶ್‌, ನಾಗೇಶ್‌ ರೆಡ್ಡಿ, ವಿಶ್ವನಾಥರೆಡ್ಡಿ, ಚಿನ್ನಪ್ಪ ಚಿಕ್ಕಹಾಗಡೆ ಪಾಲ್ಗೊಂಡು ರೈತರಿಗೆ ಬೆಂಬಲ ಸೂಚಿಸಿದರು.

ಸರ್ಕಾರದ ರೈತ ವಿರೋಧಿ

ನೀತಿ ಸರ್ಕಾರ ರೈತರ ಪರ ನಿಲ್ಲಬೇಕು. ಕೃಷಿ ಭೂಮಿಯನ್ನು ಕೈಗಾರಿಕೆಗೆ ನೀಡುವುದು ಖಂಡನೀಯ. ಈ ಭಾಗದ ರೈತರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಸರ್ಕಾರಿ ಭೂಸ್ವಾಧೀನ ಪ್ರಕ್ರಿಯೆಯನ್ನು ಹಿಂಪಡೆಯಬೇಕು. 27 ದಿನಗಳಿಂದ ರೈತರ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಗಮನ ವಹಿಸದಿರುವುದು ರೈತವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.