
ಅತ್ತಿವಟ್ಟ (ಹೊಸಕೋಟೆ): ಗ್ರಾಮದಲ್ಲಿ ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಗ್ರಾಮದ ಪಟಾಲಮ್ಮ ದೇವಿ ಮಹಿಳಾ ನಾಟಕ ತಂಡದಿಂದ ಪ್ರದರ್ಶಿಸಲಾಯಿತು.
ವೇಣುಗೋಪಾಲ ಅವರ ನಿರ್ದೇಶನ ಮತ್ತು ಮುರಳಿ ಅವರ ತಬಲವಾದ, ಮಧು ಅವರ ಸೋಲೆಕ್ಸ್ ವಾದನದಲ್ಲಿ ಮೂಡಿಬಂದ ಪೌರಾಣಿಕ ಕುರುಕ್ಷೇತ್ರ ನಾಟಕಕ್ಕೆ ಬಯಲು ರಂಗದಲ್ಲಿ ಮಹಿಳಾ ಕಲಾವಿದರು ಕರ್ಣರಸಗಳನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಕರ್ಣನ ಪಾತ್ರ ಗ್ರಾಮಸ್ಥರಲ್ಲಿ ಸತ್ಯವಂತನಾದರೂ ಅಧರ್ಮದ ಸಂಗಡದಿಂದ ಹೇಗೆ ದುರಂತ ಅಂತ್ಯ ಕಾಣಬೇಕಾಯಿತು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸುವಲ್ಲಿ ಎಲ್ಲಿಯೂ ಕಲಾವಿದರು ಸೋಲಲಿಲ್ಲ.
ಅರ್ಜುನ ಕುರುಕ್ಷೇತ್ರದ ಕಾಳಗದಲ್ಲಿ ರಕ್ತ ಸಂಬಂಧಿಕರ ಮುಂದೆ ಯುದ್ಧ ಮಾಡುವುದಿಲ್ಲ ಎಂದು ನಿರಸ್ತ್ರನಾದಾಗ ಕೃಷ್ಣ ತನ್ನ ಅಖಂಡ ರೂಪ ತೋರಿಸುವ ಪ್ರಸಂಗವು ಭಗವಾನ್ ವಿಷ್ಣು ಪರಮಾತ್ಮನೇ ಬಂದನೇನೋ ಎನ್ನುವಂತೆ ಮೂಡಿಬಂದಿತು.
ತಾಲ್ಲೂಕು ಕಲಾವಿದರ ಸಂಘದ ಉಪಾಧ್ಯಕ್ಷ ನಟರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳನ್ನು ನೋಡುವವರ ಸಂಖ್ಯ ಗಣನೀಯ ಕುಸಿದಿದೆ. ಪೌರಾಣಿಕ ನಾಟಕಗಳ ಮೂಲಕ ಮಹಾಕಾವ್ಯಗಳ ಮೌಲ್ಯಗಳನ್ನು ಸಮಾಜಕ್ಕೆ ಮುಟ್ಟಿಸುವಲ್ಲಿ ತಮ್ಮ ಜೀವವನ್ನೇ ಮುಡುಪಿಟ್ಟ ಕಲಾವಿದರಿಗೆ ಭದ್ರತೆ ಅಥವಾ ಅವರ ರಂಗ ಪ್ರದರ್ಶನಕ್ಕೆ ತಾಲ್ಲೂಕಿನಲ್ಲಿ ಒಂದು ರಂಗ ಮಂದಿರವೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕುರುಬರ ಸಂಘದ ಮಾಜಿ ನಿರ್ದೇಶಕ ಅತ್ತಿವಟ್ಟ ಕೆ. ನಾಗೇಶ್ ಮಾತನಾಡಿ, ಗ್ರಾಮದ ಮಹಿಳೆಯರು ರಂಗಭೂಮಿಗೆ ಬಣ್ಣ ಹಚ್ಚಿ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರಿಗೆ ಇನ್ನಷ್ಟು ಪ್ರೋತ್ಸಾಹ ಸಹಕಾರ ಸಿಕ್ಕರೆ ರಂಗಭೂಮಿಯಲ್ಲಿ ತಮ್ಮ ಛಾಪು ಮೂಡಿಸಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ನಾಟಕ ನಿರ್ದೇಶಕ ಮುನಿರಾಜು ಭಾಗವತ, ಕಲಾವಿದರ ಸಂಘದ ಕಾರ್ಯದರ್ಶಿ ಡಿ ಮಂಜುನಾಥ್, ಗ್ರಾ.ಪಂ. ಸದಸ್ಯ ರಮೇಶ್, ಹಿರಿಯ ಕಲಾವಿದ ಲಿಂಗೇಗೌಡ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.