ADVERTISEMENT

ಜಮೀನುಗಳಿಗೆ ನೀರು ಹರಿಸಲು ಶ್ರಮ

ಸ್ವತಂತ್ರ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಕೆ * ಜನರಿಗೆ ಭರವಸೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 13:34 IST
Last Updated 14 ನವೆಂಬರ್ 2019, 13:34 IST
ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರವನ್ನು ಚುನಾವಣಾ ಅಧಿಕಾರಿ ಎಚ್.ಎಲ್.ನಾಗರಾಜ್ ಅವರಿಗೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ತಾಯಿ ಉಮಾದೇವಿ, ಪತ್ನಿ ಪ್ರತಿಭಾ , ಹುಲ್ಲೂರು ಮಂಜುನಾಥ್ ಜತೆಗಿದ್ದರು
ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರವನ್ನು ಚುನಾವಣಾ ಅಧಿಕಾರಿ ಎಚ್.ಎಲ್.ನಾಗರಾಜ್ ಅವರಿಗೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ತಾಯಿ ಉಮಾದೇವಿ, ಪತ್ನಿ ಪ್ರತಿಭಾ , ಹುಲ್ಲೂರು ಮಂಜುನಾಥ್ ಜತೆಗಿದ್ದರು   

ಹೊಸಕೋಟೆ: ಬಯಲುಸೀಮೆ ಪ್ರದೇಶವಾದ ತಾಲ್ಲೂಕಿನ ಜಮೀನುಗಳಿಗೆ ನೀರು ಹರಿಸಲು ಶ್ರಮಿಸುವುದಾಗಿ ಶರತ್‌ ಬಚ್ಚೇಗೌಡ ಭರವಸೆ ನೀಡಿದರು.

ಸ್ವಾಭಿಮಾನಿ ಹೊಸಕೋಟೆ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದ ನಂತರ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು. ತಾಲ್ಲೂಕಿನಲ್ಲಿ 80ಕಿಲೋ ಮೀಟರ್ ಹಾದು ಹೋಗುವ ಕೆಸಿ ವ್ಯಾಲಿಯಿಂದ ಕೆರೆಗಳನ್ನು ತುಂಬಿಸಲು ಪ್ರಯತ್ನ ಮಾಡದವರಿಗೆ ಈಗ ಕೆರೆಗಳಿಗೆ ನೀರು ತುಂಬಿಸುವ ವಿಚಾರ ನೆನಪಾಗಿದೆ. ಅವರಿಗೆ ಕೆರೆಗಳಿಗೆ ನೀರು ತುಂಬಿಸುವುದು ಬೇಡ. ಕೆರೆಗಳು ತುಂಬಿದರೆ ಯಾವುದೇ ರೈತ ಜಮೀನು ಮಾರಾಟ ಮಾಡುವುದಿಲ್ಲ. ಇದರಿಂದ ಅವರ ರಿಯಲ್ ಎಸ್ಟೇಟ್ ನಡೆಯುವುದಿಲ್ಲ ಎಂದು ಎಂಟಿಬಿ ನಾಗರಾಜ್ ವಿರುದ್ಧ ವಾಗ್ದಾಳಿ ನಡೆಸಿದರು.

‘ನಾವು ಯಾರಿಗೂ ಮಾರಾಟವಾಗಿಲ್ಲ. ಯಾವುದೇ ಹುದ್ದೆಗೂ ಆಸೆ ಪಡಲಿಲ್ಲ. ನನಗೆ ಬೇಕಾಗಿರುವುದು ಸ್ವಾಭಿಮಾನಿ ಹೊಸಕೋಟೆ ಜನರ ಸೇವೆ ಮಾಡಲು ಅವಕಾಶ. ಇದಕ್ಕಾಗಿ ಇನ್ನೂ ಮೂರುವರೆ ವರುಷ ಕಾಯಬೇಕಿತ್ತು. ಆದರೆ, ಜನರು ಕೊಟ್ಟ ಅವಕಾಶ ತಿರಸ್ಕರಿಸಿ ನನಗೆ ಅವಕಾಶ ಕೊಟ್ಟಿದ್ದಾರೆ. ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಲು ನನ್ನ ಗೆಲುವಿಗೆ ಸಹಕರಿಸಬೇಕು. ತಂದೆ ಬಿ.ಎನ್.ಬಚ್ಚೇಗೌಡರಾಗಲಿ ಅಥವಾ ಯಾವುದೇ ನಾಯಕರು ನನ್ನೊಂದಿಗೆ ಪ್ರಚಾರಕ್ಕೆ ಬರುವುದಿಲ್ಲ. ಸಾಮಾನ್ಯ ಕಾರ್ಯಕರ್ತರೇ ನನಗೆ ಪ್ರಚಾರಕರು’ ಎಂದರು.

ADVERTISEMENT

ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ತಾಯಿ ಉಮಾದೇವಿ, ಪತ್ನಿ ಪ್ರತಿಭಾ, ಬೈರೇಗೌಡ, ಹುಲ್ಲೂರು ಮಂಜುನಾಥ್ ಹಾಗೂ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.