ADVERTISEMENT

ಭೂಸ್ವಾಧೀನ: ಶ್ವೇತಪತ್ರ ಹೊರಡಿಸಲು ಆಗ್ರಹ

ರೈತ, ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 16:42 IST
Last Updated 7 ಫೆಬ್ರುವರಿ 2025, 16:42 IST
ಆನೇಕಲ್ ತಾಲ್ಲೂಕಿನ ಬಿ.ಹೊಸಹಳ್ಳಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು
ಆನೇಕಲ್ ತಾಲ್ಲೂಕಿನ ಬಿ.ಹೊಸಹಳ್ಳಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು   

ಆನೇಕಲ್: ಸರ್ಜಾಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕೆಐಎಡಿಬಿಯು ಭೂಸ್ವಾಧೀನಕ್ಕೆ ಮುಂದಾಗಿರುವುದಕ್ಕೆ ರೈತ ಸಂಘ ವಿರೋಧ ವ್ಯಕ್ತಪಡಿಸಿದೆ. 

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ರೈತ ಮತ್ತು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ಸರ್ಕಾರ ಕೆಐಎಡಿಬಿ ಮತ್ತು ಬಿಡಿಎ ಇವೆರಡನ್ನು ರದ್ದು ಮಾಡಬೇಕು. ಇವೆರಡು ಭೂಕಳ್ಳತನ ನಡೆಯಲು ಸರಳ ವಿಧಾನವಾಗಿದೆ. ರೈತರ ಭೂಮಿ ಕದಿಯಲು ಇದೊಂದು ದಾರಿಯಾಗಿದೆ. ಕೈಗಾರಿಕೆಗಳನ್ನು ಮಾಡಲು ಭೂಮಿ ವರ್ಗೀಕರಣ ಮಾಡಲಾಗಿದೆ. ಎ,ಬಿ,ಸಿ ಮತ್ತು ಡಿ ಎಂದು ವಿಂಗಡಿಸಲಾಗಿದೆ. ಎ ಮತ್ತು ಬಿ ಕೃಷಿಗೆ ಯೋಗ್ಯ ಭೂಮಿಯಾಗಿದೆ. ಆದರೆ, ಕೃಷಿ ಭೂಮಿಯನ್ನೇ ಕೆಐಎಡಿಬಿಯು ಭೂಸ್ವಾಧೀನ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದರು.

ಕಳೆದ 20ವರ್ಷಗಳಲ್ಲಿ 2.5ಲಕ್ಷ ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದೆ. ಈ ಪೈಕಿ ಎಷ್ಟು ಎಕರೆ ಭೂಮಿ ಕೈಗಾರಿಕಾ ಪ್ರದೇಶವಾಗಿದೆ. ಶೇ25ರಷ್ಟು ಭೂಮಿಯನ್ನು ಸಹ ಸರಿಯಾದ ಮಾರ್ಗದಲ್ಲಿ ಅಭಿವೃದ್ಧಿಪಡಿಸಲಾಗಲಿಲ್ಲ. ಶೇ25ರಷ್ಟು ಭೂಮಿ ಕೈಗಾರಿಕೆಯಾಗಿ ಮಾಡಲು ಆಗದವರು ಇದೀಗ ಸರ್ಜಾಪುರ ಹೋಬಳಿಯಲ್ಲಿ ಭೂಸ್ವಾಧೀನ ಮಾಡುತ್ತಿರುವುದು ಖಂಡನೀಯ. ಈ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಈ ಮೂಲಕ ಕೈಗಾರಿಕೆಗಳ ಮಾಹಿತಿ, ಉದ್ಯೋಗ ಸೃಷ್ಟಿ, ವಿದೇಶಿ ವಿನಿಮಯ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ರಾಜ್ಯದಲ್ಲಿ ಹಣ ಹೂಡಿಕೆ ಮಾಡಿರುವವರ ವಿವರವನ್ನು ಸರ್ಕಾರ ನೀಡಬೇಕು. ಭೂಕಳ್ಳರಿಗೆ ರೈತರ ಮತ್ತು ಕೃಷಿಕರ ಭೂಮಿ ನೀಡಲು ಸಾಧ್ಯವಿಲ್ಲ. ಅನ್ನ ಬೆಳೆಯುವ ಭೂಮಿಯನ್ನು ಕೈಗಾರಿಕೆಗಳಿಗೆ ಕೊಡಲಾಗುವುದಿಲ್ಲ. ರೈತರ ಭೂಮಿಯನ್ನು ಕಳವು ಮಾಡಲು ಪ್ರಯತ್ನಸಿದರೆ ಅಧಿಕಾರದ ಕುರ್ಚಿ ಮುರಿಯಬೇಕಾಗಿದೆ. ಇದು ಎಲ್ಲ ರೈತರ ಎಚ್ಚರಿಕೆ ಎಂದರು.

ರೈತರ ಭೂಸ್ವಾಧೀನ ಪ್ರಕ್ರಿಯೆಯು ಭೂಮಿಯನ್ನು ಲಪಾಟಾಯಿಸಲು ಇರುವ ಪ್ರಕ್ರಿಯೆ. ದೊಡ್ಡ ಹಣವಂತರು ಕೃಷಿ ಭೂಮಿ ಕಬಳಿಸಲು ಯತ್ನಿಸುತ್ತಿದ್ದಾರೆ. ಪೂರ್ವಿಕರು ಭೂಮಿಯನ್ನು ಜೋಪಾನ ಮಾಡಿದ್ದಾರೆ. ಈ ಜಮೀನುಗಳು ರೈತರ ಆಸ್ತಿಯಾಗಿದೆ ಮತ್ತು ಅಸ್ಮಿತೆಯಾಗಿದೆ. ಎಲ್ಲ ರಾಜ್ಯಗಳಲ್ಲಿಯು ಹೂಡಿಕೆಗಾರರ ಸಮ್ಮೇಳನ ನಡೆಯುತ್ತಿವೆ. ಇದರಿಂದಾಗಿ ಸರ್ಕಾರ ಮತ್ತು ಕೈಗಾರಿಕೋದ್ಯಮಿಗಳಿಗೆ ಲಾಭವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಜಾಪುರ ಹೋಬಳಿಯಲ್ಲಿ ರೈತರ ಭೂಸ್ವಾಧೀನದ ಪ್ರಕ್ರಿಯೆ ರದ್ದು ಮಾಡಬೇಕು. ಇಲ್ಲವಾದ್ದಲ್ಲಿ ಸಾರ್ವಜನಿಕ ಸಭೆಗೆ ಬರಬೇಕು. ರೈತರ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ರೈತರ ಅನುಮತಿ ಇಲ್ಲದೆ ಪಹಣಿಯಲ್ಲಿ ಕೈಗಾರಿಕಾ ಭೂಸ್ವಾಧೀನ ಎಂದು ಬರುತ್ತಿದೆ. ಇದು ಸರ್ವಾಧಿಕಾರ ಧೋರಣೆ ಎಂದು ಟೀಕಿಸಿದರು.

ಆನೇಕಲ್‌ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಗೌರವ ಅಧ್ಯಕ್ಷ ಜಯಪ್ರಕಾಶ್‌ ಮಾತನಾಡಿ, ರೈತರಿಗೆ ಮಾಹಿತಿ ನೀಡದೆ ಏಕಾಏಕಿ ದೌರ್ಜನ್ಯ ಮತ್ತು ದರ್ಪದಿಂದ ರೈತರ ಭೂಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ. ಈ ಕ್ರಮವನ್ನು ರೈತರು ವಿರೋಧಿಸಲಿದ್ದಾರೆ ಎಂದರು.

ರೈತ ಮುಖಂಡರಾದ ರಾಮಸ್ವಾಮಿರೆಡ್ಡಿ, ದೇವರಾಜು, ನಾಗೇಶ್‌ ರೆಡ್ಡಿ, ಎಚ್‌.ಪಿ.ಶಿವಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.