ಆನೇಕಲ್: ತಾಲ್ಲೂಕಿನಲ್ಲಿ ಸುಮಾರು ₹ 23.10 ಕೋಟಿ ಮೌಲ್ಯದ ಕೆರೆ ಮತ್ತು ಗೋಮಾಳ ಸೇರಿದಂತೆ 12 ಎಕರೆ ಸರ್ಕಾರಿ ಜಮೀನಿನ ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ತಹಶೀಲ್ದಾರ್ ಪಿ. ದಿನೇಶ್ ತಿಳಿಸಿದರು.
ವಣಕನಹಳ್ಳಿಯ ಸರ್ವೆ 6ರಲ್ಲಿ ಸರ್ಕಾರಿ ಕೆರೆಯ 24 ಗುಂಟೆ ಜಮೀನನ್ನು ರಾಮಚಂದ್ರರೆಡ್ಡಿ, ಬಸವರಾಜು ಎಂಬುವವರು ಒತ್ತುವರಿ ಮಾಡಿದ್ದರು. ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಿವಾಳದಲ್ಲಿ ಸರ್ವೆ ನಂ. 304 ಮತ್ತು 80ರಲ್ಲಿ ಉಪಕಾರ್ ಡೆವಲವರ್ಸ್ ಮತ್ತು ದೊಡ್ಡಮುನಿಯಪ್ಪ, ತಿಮ್ಮಾರೆಡ್ಡಿ ಎಂಬುವವರು ಒಟ್ಟು 22 ಗುಂಟೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ್ದರು ಎಂದು ವಿವರಿಸಿದರು.
ಚಂದಾಪುರದ ಸರ್ವೆ ನಂ. 71ರ ಹೂವಿನ ಕೆರೆಯ 12 ಗುಂಟೆಯನ್ನು ರಾಜಪ್ಪ ಎಂಬುವವರು ಒತ್ತುವರಿ ಮಾಡಿದ್ದರು. ಜಿಗಣಿ ಹೋಬಳಿಯ ನೊಸೇನೂರು ಗ್ರಾಮದ ಸರ್ವೆ ನಂ. 81ರಲ್ಲಿ 28 ಗುಂಟೆ ಕೆರೆ ಜಮೀನನ್ನು ಅಚ್ಯುತರಾಮ್ ಎಂಬುವರು ಒತ್ತುವರಿ ಮಾಡಿದ್ದರು. ಮಂಟಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳೇಶ್ವರಿಯ ಸರ್ವೆ ನಂ. 159ರಲ್ಲಿ ಸಮೀವುಲ್ಲಾ ಎಂಬುವವರು 1.20 ಎಕರೆ ಕೆರೆಯ ಜಮೀನು, ಸರ್ಜಾಪುರ ಹೋಬಳಿಯ ಎಸ್. ಮೇಡಹಳ್ಳಿ ಸರ್ವೆ ನಂ. 116, 103, 107ರಲ್ಲಿ 2.06 ಎಕರೆ ಸರ್ಕಾರಿ ಕೆರೆಯನ್ನು ಚಿಕ್ಕಣ್ಣ, ನೀರಗಂಟಿ ಪಾಪಯ್ಯ, ಕೃಷ್ಣಾರೆಡ್ಡಿ, ರಾಮರೆಡ್ಡಿ, ದೇವಾರೆಡ್ಡಿ ಎಂಬುವವರು ಒತ್ತುವರಿ ಮಾಡಿದ್ದರು ಎಂದು ತಿಳಿಸಿದರು.
ಚಿಕ್ಕನಾಗಮಂಗಲ ಸರ್ವೆ ನಂ. 32ರಲ್ಲಿ 0.03ಗುಂಟೆ ಜಮೀನನ್ನು ಒತ್ತುವರಿ ಮಾಡಿದ್ದರು. ಸರ್ಜಾಪುರ ಹೋಬಳಿಯ ರಾಯಸಂದ್ರದಲ್ಲಿ 35.08 ಗುಂಟೆ ಕೆರೆಯನ್ನು ಒತ್ತುವರಿ ಮಾಡಲಾಗಿತ್ತು. ಬಿ. ಹೊಸಹಳ್ಳಿಯಲ್ಲಿ ಸರ್ವೆ ನಂ. 16ರಲ್ಲಿ 1.39 ಎಕರೆ ಕೆರೆ ಜಮೀನನ್ನು ಶ್ರೀನಿವಾಸರೆಡ್ಡಿ, ಎಚ್.ಎನ್. ವೆಂಕಟಸ್ವಾಮಿ, ಅಶೋಕ್, ಲಕ್ಷ್ಮಣರೆಡ್ಡಿ, ಅಶೋಕ್, ಆನಂದ್, ನಂಬಯ್ಯ, ಆನಂದರೆಡ್ಡಿ, ಚಂದ್ರಮ್ಮ, ಯಲ್ಲಾರೆಡ್ಡಿ ಎಂಬುವವರು ಒತ್ತುವರಿ ಮಾಡಿದ್ದರು ಎಂದುವಿವರಿಸಿದರು.
ಹುಲಿಮಂಗಲದ ಸರ್ವೆ ನಂ. 156ರ ಸರ್ಕಾರಿ ಗೋಮಾಳದಲ್ಲಿ 3.20 ಎಕರೆ ಜಮೀನಿನಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರು. ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ತಹಶೀಲ್ದಾರ್ ಪಿ. ದಿನೇಶ್ತಿಳಿಸಿದರು.
ಉಪ ವಿಭಾಗಾಧಿಕಾರಿ ಡಾ.ಎಂ.ಜಿ. ಶಿವಣ್ಣ, ಡಿವೈಎಸ್ಪಿ ರಮೇಶ್, ಉಪ ತಹಶೀಲ್ದಾರ್ ಬಸವರಾಜು, ಶಿರಸ್ತೇದಾರ್ ಚಂದ್ರಶೇಖರ್, ಪ್ರಶಾಂತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.