ದೇವನಹಳ್ಳಿ: ಸೋಂಕಿತ ಕೊರೊನಾದಿಂದ ಲಾಕ್ಡೌನ್ ಜಾರಿ ಮಾಡಲಾಗಿದ್ದು ಮನೆಯಲ್ಲಿರುವ ಕುಟುಂಬದ ಸದಸ್ಯರು ಭೀತಿ ಬಿಟ್ಟು ಒಂದು ಸಸಿಯನ್ನು ನೆಟ್ಟು ಬೆಳೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಹೇಳಿದರು.
ಇಲ್ಲಿನ ಕನ್ನಮಂಗಲ ಗ್ರಾಮ ಪಂಚಾಯಿತಿ ಆವರಣದಲ್ಲಿ ನಮ್ಮ ದೇಶ ನಮ್ಮ ಪರಿಸರ ಸಂಕಲ್ಪದೊಂದಿಗೆ ಒಂದು ಸಸಿ ಬೆಳೆಸುವ ಅಭಿಯಾನದಡಿಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಈಗಾಗಲೇ ಆರಂಭಗೊಂಡಿದೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳು ಸಸಿ ನೆಡಲು ಸಕಾಲವಾಗಿದೆ. ಇಚ್ಚಿತ ಹಣ್ಣು ಹಂಪಲು ಇತರ ಯಾವುದೆ ಪ್ರಾದೇಶಿಕ ತಳಿಯ ಸಸಿಗಳನ್ನು ನೆಟ್ಟು ಪೊಷಿಸಿದರೆ ಪರಿಸರ ಸಂರಕ್ಷಣೆಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಹೇಳಿದರು.
‘ಅರಣ್ಯ ಇಲಾಖೆ ಮತ್ತು ಪ್ರಗತಿ ಪರ ಸಂಘಟನೆಗಳು ವಾರ್ಷಿಕ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಸಸಿ ನೆಟ್ಟ ಜಾಗದಲ್ಲಿ ಕೆಲಸ ಸಸಿಗಳು ಸಕಾಲದಲ್ಲಿ ನಿರ್ವಹಣೆ ಇಲ್ಲದೆ ಒಣಗಿ ಹೋಗಿವೆ. ಅಂತಹ ಜಾಗಗಳನ್ನು ಗುರುತಿಸಿ ಸಸಿ ನೆಡಬೇಕು. ಗಿಡವಾಗಿ ಬೆಳವಣಿಗೆಯಾಗುವವರಿಗೆ ಪ್ರಯತ್ನ ಬಿಡಬಾರದು’ ಎಂದು ಹೇಳಿದರು.
‘ಪ್ರಸ್ತುತ ಬಿರುಬೇಸಿಗೆಯಲ್ಲಿ ಬಿಸಲಿನ ತಾಪ ಹೆಚ್ಚುತ್ತಿದೆ.ಮನೆಯಿಂದ ಹೊರ ಬಂದರೆ ಮರದ ನೆರಳನ್ನು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬೆಂಕಿಯಂತೆ ಉಗುಳುವ ಬಿಸಲಿನ ತಾಪಕ್ಕೆ ಪ್ರಾಣಿ ಪಕ್ಷಿ ಸಂಕುಲ ತತ್ತರಿಸುತ್ತಿವೆ. ಈಗಾಗಲೇ ಮನೆಯಂಗಳ ಮತ್ತು ಮನೆಯ ಅಕ್ಕಪಕ್ಕ ಗಿಡಮರ ಬೆಳೆಸಿದ್ದರೆ ಸಣ್ಣ ಪುಟ್ಟ ಬಟ್ಟಲು, ಪ್ಲಾಸ್ಟಿಕ್ ಡಬ್ಬಗಳಲ್ಲಿ ನೀರು ತುಂಬಿಸಿ ಇಟ್ಟರೆ ಪಶು ಪಕ್ಷಿಗಳಿಗೆ ದಾಹ ತೀರಿಸಿಕೊಳ್ಳಲು ಅನುಕೂಲವಾಗಲಿದೆ ಪರಿಸರ ಪ್ರೇಮಿಗಳು ಜಾಗೃತರಾಗಬೇಕು’ ಎಂದು ಮನವಿ ಮಾಡಿದರು. ಯುವ ಮುಖಂಡ ರಾಜೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.