
ನಂದಗುಡಿ(ಹೊಸಕೋಟೆ): ಕಾನೂನು ಅರಿವು ಇಲ್ಲದೆ ಬಾಲ್ಯ ವಿವಾಹ ಹೆಸರಿನಲ್ಲಿ ಪೋಷಕರು ಮಕ್ಕಳ ಉಜ್ವಲ ಭವಿಷ್ಯಕ್ಕೆ ಕೊಳ್ಳಿ ಇಟ್ಟರೆ, ಯುವಕ–ಯುವತಿಯರು ಪ್ರೀತಿ, ಪ್ರೇಮವೆಂದು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀಶೈಲ್ ಭೀಮಸೇನ್ ಬಾಗಡಿ ಹೇಳಿದರು.
ತಾಲ್ಲೂಕಿನ ನಂದಗುಡಿ ಹೋಬಳಿಯ ಹೆತ್ತಕ್ಕಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಕ್ರಿಸ್ತು ಜಯಂತಿ ವಿಶ್ವದ್ಯಾಲಯ ಸಹಯೋಗದೊಂದಿಗೆ ಆಯೋಜಿಸಿದ್ದ ಮಹಿಳೆಯರಿಗೆ ಹಾಗೂ ಗ್ರಾಮಸ್ಥರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನ್ಯಾಯ, ಶೋಷಣೆ, ದೌರ್ಜನ್ಯದ ವಿರುದ್ಧ ಮಹಿಳೆಯರು ಧ್ವನಿ ಎತ್ತಬೇಕೆಂದರೆ ತಮ್ಮ ಹಕ್ಕುಗಳು ಮತ್ತು ಕಾನೂನು ಸೌಲಭ್ಯಗಳ ಬಗ್ಗೆ ಅರಿವು ಅಗತ್ಯ. ಆಗ ಮಾತ್ರವೇ ಮಹಿಳಾ ಸಬಲಿಕರಣ ಸಾಧ್ಯ. ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, ಆಸ್ತಿ ಹಕ್ಕು, ವಿವಾಹ ಮತ್ತು ವಿಚ್ಛೇದನ ಸಂಬಂಧಿತ ಕಾನೂನುಗಳು, ಲೈಂಗಿಕ ಕಿರುಕುಳ ತಡೆ ಕಾಯ್ದೆ, ಹಾಗೂ ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಬಗೆ ಯಾವುದೇ ಕಾರಣಕ್ಕೂ ತಿಳಿದುಕೊಳ್ಳಲು ನಿರ್ಲಕ್ಷ್ಯ ತೋರಬಾರದು. ಇವುಗಳ ಜೊತೆಗೆ ಉಚಿತ ಕಾನೂನು ನೆರವು ಸೇವೆಗಳು, ಮಹಿಳಾ ಸಹಾಯವಾಣಿ (181), ಪೊಲೀಸ್ ಸಹಾಯ ಮತ್ತು ನ್ಯಾಯಾಲಯದ ಮೂಲಕ ಪರಿಹಾರ ಪಡೆಯುವ ಅವಕಾಶಗಳೂ ಇವೆ ಎಂಬುದನ್ನು ಮರೆಯಬಾರದು ಎಂದರು.
ಗ್ರಾಮೀಣ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯಿತಿ, ಸ್ವಸಹಾಯ ಗುಂಪುಗಳು, ಶಾಲಾ ಕಾಲೇಜು ಹಾಗೂ ಕಾನೂನು ನೆರವು ಶಿಬಿರ ಮೂಲಕ ನಡೆಸುವುದು ಅತ್ಯಂತ ಪರಿಣಾಮಕಾರಿ. ಇಂತಹ ಕಾರ್ಯಕ್ರಮಗಳು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಸ್ವಾವಲಂಬನೆಗೆ ದಾರಿ ಮಾಡಿಕೊಡುತ್ತವೆ ಎಂದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೋಕೇಶ್, ಬಾಲ್ಯವಿವಾಹದಿಂದ ಮಕ್ಕಳ ಶಿಕ್ಷಣಕ್ಕೆ ತೀವ್ರ ಅಡ್ಡಿ, ಆರೋಗ್ಯ, ಮಾನಸಿಕ ಬೆಳವಣಿಗೆ ಹಾಗೂ ಭವಿಷ್ಯದ ಬದುಕು ಗಂಭೀರವಾದ ದುಷ್ಪರಿಣಾಮ ಎದುರಸಬೇಕಾಗುತ್ತದೆ. ಸರ್ಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆ–2006ರ ಮೂಲಕ ಈ ಅನಿಷ್ಟ ಪದ್ಧತಿಯನ್ನು ತಡೆಹಿಡಿಯಲು ಕ್ರಮ ಕೈಗೊಂಡಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯ ವ್ಯವಸ್ಥೆ ಮಾಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀತಾ ತ್ರಿವೇಣ್ ಕುಮಾರ್, ಉಪಾಧ್ಯಕ್ಷ ಕಲ್ಪನಾ ಚನ್ನಕೃಷ್ಣಪ್ಪ, ಕಾನೂನು ಶಾಲೆಯ ಮುಖ್ಯಸ್ಥ ಎಸ್. ಮಹೇಶ್, ರಘುರಾಮ್ ಶರ್ಮಾ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜಗದೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.