ADVERTISEMENT

‘ಕನ್ನಡಾಭಿಮಾನ ನವೆಂಬರ್‌ಗೆ ಸೀಮಿತವಾಗದಿರಲಿ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 12:52 IST
Last Updated 31 ಡಿಸೆಂಬರ್ 2019, 12:52 IST
ನಂದಗುಡಿಯಲ್ಲಿ ರಾಜ್ಯೋತ್ಸವವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು
ನಂದಗುಡಿಯಲ್ಲಿ ರಾಜ್ಯೋತ್ಸವವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು   

ಸೂಲಿಬೆಲೆ: ‘ರಾಜ್ಯೋತ್ಸವ ಕೇವಲ ಕೇವಲ ನ. 1ಕ್ಕೆ ಸೀಮಿತವಾಗಬಾರದು. ಕರ್ನಾಟಕ ಮತ್ತು ಕನ್ನಡಾಭಿಮಾನ ಪ್ರತಿದಿನದ ಕೆಲಸದಲ್ಲಿ ಇರಬೇಕು’ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ಸಿದ್ದನಹಳ್ಳಿ, ವಡ್ಡಹಳ್ಳಿ ಹಾಗೂ ಎಚ್ ಕ್ರಾಸ್ ಸರ್ಕಲ್‌ಗಳಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದ ಜನತೆ ಒಳ್ಳೆಯತನಕ್ಕೆ ಹೆಸರಾದವರು. ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಮೂಲಕ ಭಾಷೆ ಉಳಿಸಿ, ಬೆಳೆಸಬೇಕು’ ಎಂದರು.

ADVERTISEMENT

‘ಕನ್ನಡ ಸಮೃದ್ಧ ಭಾಷೆಯಾಗಿದ್ದು, ಶಾಸ್ತ್ರೀಯ ಸ್ಥಾನ ಪಡೆದಿದೆ. ಕನ್ನಡದ 8 ಸಾಹಿತಿಗಳು ಜ್ಞಾನಪೀಠ ಪುರಸ್ಕಾರ ಪಡೆದಿದ್ದು, ಕನ್ನಡ ಸಾಹಿತ್ಯದ ಹಿರಿಮೆಗೆ ಸಾಕ್ಷಿಯಾಗಿದ್ದಾರೆ’ ಎಂದರು.

‘ಪೋಷಕರಲ್ಲಿ ಆಂಗ್ಲ‌ಶಾಲೆ ವ್ಯಾಮೋಹ ಹೆಚ್ಚುತ್ತಿದೆ. ಅದನ್ನು ಬಿಟ್ಟು ಕನ್ನಡ ಶಾಲೆಗಳನ್ನು ಉಳಿಸುವ ಕಡೆ ಗಮನಹರಿಸಬೇಕು. ಆಂಗ್ಲಭಾಷೆ ಕಲಿಯುವುದು, ಮಾತನಾಡುವುದು ತಪ್ಪಲ್ಲ. ಆದರೆ ಅದರ ವ್ಯಾಮೋಹದಲ್ಲಿ ನಮ್ಮತನ, ಭಾಷಾ ಅಸ್ಮಿತೆ ಕಳೆದುಕೊಳ್ಳಬಾರದು’ ಎಂದರು.

‘ಹೊಸಕೋಟೆ ಉಪ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಹಾಗೂ ಸರ್ಕಾರವಿದ್ದರೂ, ತಾಲ್ಲೂಕಿನ ಸ್ವಾಭಿಮಾನ ಉಳಿಸಿಕೊಂಡ ಹಾಗೆ ಕನ್ನಡ ಭಾಷೆ, ಕರ್ನಾಟಕದ ಸ್ವಾಭಿಮಾನ ಉಳಿಸಿಕೊಳ್ಳಬೇಕು’ ಎಂದರು.

ಬಿ.ವಿ.ರಾಜಶೇಖರಗೌಡ, ಮಂಜು ಎನ್ ಗೌಡ, ಲಕ್ಷೀನಾರಾಯಣ್, ಅಯೂಬ್ ಬೇಗ್, ಗೋಪಾಲಗೌಡ, ಸೀತೇಗೌಡ, ಬೈರೇಗೌಡ, ಲೋಕೇಶ್, ಗ್ರಾಮದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.