ದೇವನಹಳ್ಳಿ:ತಾಲ್ಲೂಕಿನಲ್ಲಿ ಎರಡನೇ ಹಂತದ ಲಾಕ್ಡೌನ್ ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಬಹುತೇಕ ಯಶಸ್ಸಿಯಾಗಿ ಜಾರಿಯಾಯಿತು. ಮೂರು ದಿನಗಳ ಮೊದಲೇ ಘೋಷಿಸಿದ್ದರಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿತ್ತು.
ಬೆಳಿಗ್ಗೆ 5ರಿಂದ ಮಧ್ಯಾಹ್ನ 12ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಮಾರಾಟಗಾರರು ಮತ್ತು ಗ್ರಾಹಕರು ಕಟ್ಟುನಿಟ್ಟಿನ ಆದೇಶವನ್ನು ಉಲ್ಲಂಘಿಸಿದರು. ಅಂತರ ಕಾಯ್ದುಕೊಳ್ಳುವ ನಿಯಮವನ್ನು ಪಾಲಿಸಲಿಲ್ಲ.
ಕೆಲವರು ಮಾಸ್ಕ್ ಧರಿಸಿರಲಿಲ್ಲ. ಪೊಲೀಸರ ಗಸ್ತು ವಾಹನದ ಶಬ್ದ ಕೇಳಿದ ತಕ್ಷಣ ಅಂತರ ಕಾಯ್ದುಕೊಳ್ಳಲು ಗ್ರಾಹಕರು ಮುಂದಾದರು. ಕೆಲವು ಗ್ರಾಹಕರ ಬೇಜವಾಬ್ದಾರಿಯನ್ನು ಮಾರಾಟಗಾರರು ಪ್ರಶ್ನಿಸಲಿಲ್ಲ.
ನಗರದಿಂದ ಹೊರಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಸಂಚಾರ ನಿಷೇಧಿಸಲಾಗಿತ್ತು. ಸಂಚಾರಕ್ಕೆ ಇಳಿದ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದರು. ಅಗತ್ಯ ಇಲ್ಲದೇ ಸಂಚಾರ ನಡೆಸಿದ ಕೆಲ ದ್ವಿಚಕ್ರ ವಾಹನ ಸವಾರರಿಗೆ ಲಾಠಿ ರುಚಿ ತೋರಿಸಿದರು.
ದೈನಂದಿನ ಪ್ರಯಾಣದ ಯಾವುದೇ ಬಸ್, ಆಟೊ ರಸ್ತೆಗಿಳಿಯಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.