ADVERTISEMENT

ದೇವನಹಳ್ಳಿ ತಾಲ್ಲೂಕು ಕಚೇರಿಗೆ ಲೋಕಾಯುಕ್ತ ದಾಳಿ: ದಾಖಲೆಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:46 IST
Last Updated 19 ಫೆಬ್ರುವರಿ 2026, 4:46 IST
ದೇವನಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಗಿರೀಶ್ ರೋಡ್ಕರ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ವಿವಿಧ ಕಂದಾಯ ದಾಖಲೆಗಳನ್ನು ಪರಿಶೀಲಿಸಿದರು.
ದೇವನಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಗಿರೀಶ್ ರೋಡ್ಕರ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ವಿವಿಧ ಕಂದಾಯ ದಾಖಲೆಗಳನ್ನು ಪರಿಶೀಲಿಸಿದರು.   

ದೇವನಹಳ್ಳಿ: ಪಟ್ಟಣದ ತಾಲ್ಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಏಕಾಏಕಿ ದಾಳಿ ನಡೆಸಿ ಕಂದಾಯ ಇಲಾಖೆಯ ಹಲವು ದಾಖಲೆಗಳನ್ನು ಪರಿಶೀಲಿಸಿದರು.

ಲೋಕಾಯುಕ್ತ ಡಿವೈಎಸ್ಪಿ ಗಿರೀಶ್ ರೋಡ್ಕರ್ ಹಾಗೂ ಗೌತಮ್ ಅವರ ನೇತೃತ್ವದಲ್ಲಿ ನಡೆದ ಪರಿಶೀಲನೆಯಲ್ಲಿ ಇನ್ಸ್‌ಪೆಕ್ಟರ್‌ಗಳಾದ ಚಂದ್ರಕಾಂತ್ ಮತ್ತು ರಮೇಶ್ ಭಾಗವಹಿಸಿದ್ದರು. ಕಚೇರಿಯ ಕ್ಯಾಶ್ ಡೆಪಾಸಿಟ್ ರಿಜಿಸ್ಟರ್, ಹಾಜರಾತಿ ವಹಿ ಸೇರಿದಂತೆ ವಿವಿಧ ಕಡತಗಳ ವಹಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು.

ಅಧಿಕಾರಿಗಳ ಕಾರ್ಯವೈಖರಿ, ದಾಖಲೆ ಸಂಗ್ರಹ ಮತ್ತು ಹಣಕಾಸು ವ್ಯವಹಾರಗಳ ದಾಖಲಾತಿಗಳ ಬಗ್ಗೆ ಲೋಕಾಯುಕ್ತ ತಂಡ ಮಾಹಿತಿ ಕಲೆಹಾಕಿತು. ಕಡತಗಳ ಪರಿಶೀಲನೆಯ ನಂತರ ಸಂಬಂಧಿತ ಅಧಿಕಾರಿಗಳಿಂದ ಸ್ಪಷ್ಟನೆಗಳನ್ನು ಪಡೆಯಲಾಯಿತು.

ADVERTISEMENT

ಈ ವೇಳೆ ದೇವನಹಳ್ಳಿ ತಹಶೀಲ್ದಾರ್ ಅನಿಲ್ ಅವರಿಂದಲೂ ಲೋಕಾಯುಕ್ತ ಅಧಿಕಾರಿಗಳು ಅಗತ್ಯ ಮಾಹಿತಿಯನ್ನು ಸಂಗ್ರಹಿಸಿದರು. ಪರಿಶೀಲನೆ ವೇಳೆ ಕಚೇರಿಯಲ್ಲಿ ಕೆಲಕಾಲ ಚಟುವಟಿಕೆ ಹೆಚ್ಚಾಗಿದ್ದು, ಸಾರ್ವಜನಿಕರ ಗಮನ ಸೆಳೆಯಿತು.

ಹಲವು ಕಂದಾಯ ಭೂಮಿಗಳಿಗೆ ಬಿ ಖಾತೆ ನೆಪದಲ್ಲಿ ದೇವನಹಳ್ಳಿ ಪುರಸಭೆಯ ಸಿಬ್ಬಂದಿಯೂ ಅನಧಿಕೃತವಾಗಿ ಖಾತೆಯನ್ನು ಸೃಜಿಸಿರುವ ಆರೋಪದ ಕುರಿತು, ಪುರಸಭೆಯ ಸಿಬ್ಬಂದಿಯಿಂದ ಕಡತವನ್ನು ತರಿಸಿ ಅವುಗಳ ಬಗ್ಗೆ ಮಾಹಿತಿಯನ್ನು ಲೋಕಾಯುಕ್ತ ಪೊಲೀಸರು ಮಾಹಿತಿ ಪಡೆದುಕೊಂಡರು.

ರೆಕಾರ್ಡ್‌ ರೂಂ ಸೇರಿದ ನಕಲಿ ದಾಖಲೆಗಳು: ಆರೋಪ

ಭೂ ಸುರಕ್ಷಾ ಯೋಜನೆ ಜಾರಿಗೆ ಬಂದ ಬಳಿಕ ಎಲ್ಲಾ ಕಡತಗಳನ್ನು ಸ್ಕ್ಯಾನಿಂಗ್ ಮಾಡುವ ಕಾರ್ಯ ಆರಂಭಗೊಂಡಿದೆ. ಈ ನಡುವೆ ದೇವನಹಳ್ಳಿಯ ಕಂದಾಯ ಇಲಾಖೆಯ ರೆಕಾರ್ಡ್‌ ರೂಂನಲ್ಲಿ ಈ ಹಿಂದೆಯೇ ಭೂಮಿ ಮಂಜೂರು ಆಗಿರುವಂತೆ ತೋರಿಸುವ ಇನಾಂ ಗ್ರಾಂಟ್‌, ಎಲ್‌ಆರ್‌ಎಫ್‌ ಗ್ರಾಂಟ್‌ ಸೇರಿದಂತೆ ಹಲವು ಕೈಬರಹದ ಆರ್‌ಟಿಸಿಗಳನ್ನು ತಿದ್ದುಪಡಿ ಮಾಡಿ ಸ್ಕ್ಯಾನ್ ಮಾಡಿ ಸೇರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸಾರ್ವಜನಿಕರ ಲಾಗ್‌ಇನ್ ಮೂಲಕ ಈ ರೀತಿಯಾಗಿ ಸೃಷ್ಟಿಸಲಾದ ದಾಖಲೆಗಳನ್ನು ಪಡೆದು ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ಸಲ್ಲಿಕೆ ಮಾಡಿ, ರಾತ್ರೋರಾತ್ರಿ ಕಂದಾಯ ದಾಖಲೆಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಲೋಕಾಯುಕ್ತಕ್ಕೆ ಸಾಕಷ್ಟು ದೂರುಗಳು ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ರೆಕಾರ್ಡ್‌ ರೂಂ ಸಿಬ್ಬಂದಿ ಮನೆ ಜಾಲಾಡಿದ ಲೋಕಾಯುಕ್ತ

ರೆಕಾರ್ಡ್‌ ರೂಂನಲ್ಲಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಸೇರಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಕಚೇರಿಯ ದಾಖಲೆಗಳನ್ನು ಪರಿಶೀಲಿಸುವುದರ ಜೊತೆಗೆ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಮನೆಗಳ ಮೇಲೂ ದಾಳಿ ನಡೆಸಿ ಶೋಧ ಕಾರ್ಯ ನಡೆಸಿರುವುದಾಗಿ ಮೂಲಗಳು ತಿಳಿಸಿವೆ. ಶೋಧ ವೇಳೆ ಕೆಲವು ಮಹತ್ವದ ದಾಖಲೆಗಳು ಪತ್ತೆಯಾಗಿರುವುದಾಗಿ ಹೇಳಲಾಗಿದೆ.ಪರಿಶೀಲನೆ ಸಂಬಂಧ ಮುಂದಿನ ಕ್ರಮಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.