ADVERTISEMENT

ಕಾಂಗ್ರೆಸ್‌ನಿಂದ ಕೀಳುಮಟ್ಟದ ರಾಜಕೀಯ: ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 5:47 IST
Last Updated 29 ಸೆಪ್ಟೆಂಬರ್ 2022, 5:47 IST
ದೇವನಹಳ್ಳಿ ಪಟ್ಟಣದಲ್ಲಿ ಬಿಜೆಪಿಯಿಂದ ಭಗತ್ ಸಿಂಗ್ ಜನ್ಮ ದಿನ ಆಚರಿಸಲಾಯಿತು
ದೇವನಹಳ್ಳಿ ಪಟ್ಟಣದಲ್ಲಿ ಬಿಜೆಪಿಯಿಂದ ಭಗತ್ ಸಿಂಗ್ ಜನ್ಮ ದಿನ ಆಚರಿಸಲಾಯಿತು   

ದೇವನಹಳ್ಳಿ: ‘ಕಾಂಗ್ರೆಸ್ ಜೋಡೊ ಕಾರ್ಯಕ್ರಮ ಕೇವಲ ಬಿಜೆಪಿ ಸರ್ಕಾರವನ್ನು ಟೀಕೆ ಮಾಡುವ ಅಭಿಯಾನವಾಗಿದೆ. ಕಾಂಗ್ರೆಸ್ಸಿಗರು ಟೀಕೆ ಮಾಡುವುದನ್ನು ಬಿಟ್ಟು ಜನಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಮಾಜಿ ಶಾಸಕ ಚಂದ್ರಣ್ಣ ಅಭಿಪ್ರಾಯಪಟ್ಟರು.

ಪಟ್ಟಣದ ಶಾಂತಿನಿಕೇತನ ಶಾಲಾ ಮೈದಾನದಲ್ಲಿ ಬುಧವಾರ ಬಿಜೆಪಿ ಹಿಂದುಳಿದ ವರ್ಗದ ಪ್ರಕೋಷ್ಠದಿಂದ‌ ಹಮ್ಮಿಕೊಂಡಿದ್ದ ಭಗತ್ ಸಿಂಗ್ ಜನ್ಮ ದಿನಾಚರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗತಕಾಲದ ತಪ್ಪುಗಳ‌ ವಿಮರ್ಶೆ ಮಾಡುವುದನ್ನು ಬಿಟ್ಟು, ಭವಿಷ್ಯದ ಅಭಿವೃದ್ಧಿಗೆ ಹಿರಿತನದ ಅನುಭವವನ್ನು ಕಾಂಗ್ರೆಸ್ಸಿಗರು ಉಪಯೋಗಿಸಬೇಕು. ‘ಪೇಸಿಎಂ’ನಂತಹ ಕೀಳುಮಟ್ಟದ ರಾಜಕೀಯ ಮಾಡಬಾರದು ಎಂದು ಕುಟುಕಿದರು.

ADVERTISEMENT

ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ‘ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಒದಗಿಸುವುದು ಸರ್ಕಾರದ‌‌ ಮುಖ್ಯ ಧ್ಯೇಯವಾಗಿರಬೇಕು. ಜೆಡಿಎಸ್ ಸಂಘಟನೆಗೆ ಕಾರ್ಯಕರ್ತರು ಇಲ್ಲದಂತಾಗಿದ್ದು, ಇದೊಂದು ಮಾಲೀಕತ್ವದ ಪಕ್ಷವಾಗಿದೆ’ ಎಂದರು.

ಜಿಲ್ಲಾ ಬಿಜೆಪಿ‌ ರೈತಾ ಮೋರ್ಚಾದ‌ ಸಂಚಾಲಕ ಎಚ್.ಎಂ. ರವಿಕುಮಾರ್ ಮಾತನಾಡಿ, ‘15 ದಿನಗಳಿಂದ‌ ಸೇವಾ ಪಾಕ್ಷಿಕ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ನಗರೀಕರಣದಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿದೆ. ಪ್ರತಿ ವಾರ್ಡ್‌ನಲ್ಲಿಯೂ 10 ಸಸಿ ನೆಡುವ ಮೂಲಕ ಪರಿಸರ ಕಾಳಜಿ ಮೆರೆಯಬೇಕು’ ಎಂದು ತಿಳಿಸಿದರು.

ಬಿಜೆಪಿ‌ ಜಿಲ್ಲಾ ಅಧ್ಯಕ್ಷ ಎ.ವಿ. ನಾರಾಯಣಸ್ವಾಮಿ, ಬೈಯಪ್ಪ ಮಾಜಿ ಅಧ್ಯಕ್ಷ ಅಶ್ವಥ್‌ನಾರಾಯಣ, ಜಿಲ್ಲಾ ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಸಂಚಾಲಕ ಅಂಬರೀಶ್, ಮುಖಂಡರಾದ ಒಬದೇನಹಳ್ಳಿ ಮುನಿಯಪ್ಪ, ತಾಲ್ಲೂಕು ಅಧ್ಯಕ್ಷ ಸುಂದರೇಶ್, ಉಪಾಧ್ಯಕ್ಷ ನಾಗೇಶ್, ಆವತಿ ಶಕ್ತಿ ಕೇಂದ್ರದ ಅಧ್ಯಕ್ಷ ತಮ್ಮಯ್ಯ, ಪುರಸಭೆ ಸದಸ್ಯ ಬಾಂಬೆ ನಾರಾಯಣಸ್ವಾಮಿ, ನಾಮಿನಿ ಸದಸ್ಯ ಮಧು, ಪುನೀತಾ, ಮುಖಂಡರಾದ ನಾಗವೇಣಿ, ವಿಮಲಾ, ಲಕ್ಷ್ಮೀ, ಗೋಪಿನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.