ADVERTISEMENT

ಮದುವೆ ಆಗು ಎಂದಿದ್ದಕ್ಕೆ ತಾಯಿ–ಮಗಳನ್ನು ಕೊಂದ

ಕೊಲೆ ಬಳಿಕ ಪೊಲೀಸರಿಗೆ ಶರಣಾದ ಆರೋಪಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 5:05 IST
Last Updated 11 ಜನವರಿ 2021, 5:05 IST
ಕೊಲೆಯಾದ ತಾಯಿ ಲಕ್ಷ್ಮೀದೇವಿ ಮತ್ತು ಮಗಳು ರಮಾದೇವಿ
ಕೊಲೆಯಾದ ತಾಯಿ ಲಕ್ಷ್ಮೀದೇವಿ ಮತ್ತು ಮಗಳು ರಮಾದೇವಿ   

ದೇವನಹಳ್ಳಿ: ಮದುವೆ ಯಾಗುವಂತೆ ಒತ್ತಾಯ ಮಾಡಿದ ತಾಯಿ–ಮಗಳನ್ನು ಶನಿವಾರ ತಡರಾತ್ರಿ ಇಲ್ಲಿಯ ಬೈಚಾಪುರ ಗ್ರಾಮದಲ್ಲಿ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಆರೋಪಿ, ಕೃತ್ಯದ ಬಳಿಕ ದೇವನಹಳ್ಳಿ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ.

’ಬಾಗೇಪಲ್ಲಿ ಪಟ್ಟಣದ ರಮಾದೇವಿ (35) ಮತ್ತು ಅವರ ತಾಯಿ ಲಕ್ಷ್ಮಿದೇವಿ (55) ಕೊಲೆಯಾದವರು. ಆರೋಪಿ ಮಲಯ್ ಫರೀದ್ ಎಂಬಾತ ಠಾಣೆಗೆ ಬಂದು ಶರಣಾಗಿದ್ದಾನೆ’ ಎಂದು ದೇವನಹಳ್ಳಿ ಪೊಲೀಸರು ಹೇಳಿದರು.

ಮಲಯ್ ಫರೀದ್

‘ಒಡಿಶಾದ ಫರೀದ್, ಇಲ್ಲಿಯ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಸ್ವಚ್ಛತಾ ಕಾರ್ಮಿಕರ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಕೊಲೆಯಾಗಿರುವ ರಮಾದೇವಿ ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಕೆಲಸದ ಸ್ಥಳದಲ್ಲೇ ಅವರಿಬ್ಬರಿಬ್ಬರಿಗೆ ಪರಿಚಯವಾಗಿತ್ತು. ನಂತರ, ಸಲುಗೆಯೂ ಬೆಳೆದಿತ್ತು. ಅವರಿಬ್ಬರು ಒಂದೇ ಮನೆಯಲ್ಲೇ ವಾಸವಿದ್ದರು’ ಎಂದೂ ತಿಳಿಸಿದರು.

ADVERTISEMENT

‘ಮದುವೆಯಾಗುವುದಾಗಿ ಹೇಳಿದ್ದ ಆರೋಪಿ, ರಮಾದೇವಿ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದ. ಅದರಿಂದಾಗಿ ಗರ್ಭಿಣಿ ಆಗಿದ್ದ ರಮಾದೇವಿ, ನಾಲ್ಕು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಲಾಕ್‌ಡೌನ್‌ ವೇಳೆ ಒಡಿಶಾಗೆ ತೆರಳಿದ್ದ ಮಲಯ್, 15 ದಿನಗಳ ಹಿಂದೆ ಬೈಚಾಪುರ ಗ್ರಾಮಕ್ಕೆ ವಾಪಸು ಬಂದಿದ್ದ.’

‘ತಮ್ಮ ಮಗಳು ರಮಾದೇವಿ ಅವರನ್ನು ಮದುವೆ ಯಾಗುವಂತೆ ತಾಯಿ ಲಕ್ಷ್ಮಿದೇವಿ, ಆರೋಪಿ ಮಲಯ್‌ಗೆ ಹೇಳಿದ್ದರು. ಅದಕ್ಕೆ ಒಪ್ಪದ ಮಲಯ್, ತಾಯಿ–ಮಗಳ ಜೊತೆಯೇ ಜಗಳ ಮಾಡಿದ್ದ.’

‘ಮದುವೆ ವಿಚಾರವಾಗಿ ಶನಿವಾರ ರಾತ್ರಿಯೂ ಜಗಳ ಆಗಿತ್ತು. ಜಗಳದ ನಂತರ ತಾಯಿ ಮತ್ತು ಮಗಳು ಮಲಗಿದ್ದರು. ಅದೇ ವೇಳೆಯೇ ಆರೋಪಿ, ಅವರಿಬ್ಬರ ಮೇಲೆ ದಾಳಿ ಮಾಡಿದ್ದ. ಇಬ್ಬರಿಗೂ ಮಚ್ಚಿನಿಂದ ಹೊಡೆದಿದ್ದ. ತೀವ್ರ ರಕ್ತಸ್ರಾವದಿಂದ ತಾಯಿ–ಮಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ನಂತರ ಆರೋಪಿ ತಾನೇ ಠಾಣೆಗೆ ಬಂದು ಶರಣಾಗಿದ್ದಾನೆ’ ಎಂದೂ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.