ಹೊಸಕೋಟೆ: ರಾಜ್ಯ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಶರತ್ ಬಚ್ಚೇಗೌಡರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದರೆ ತಾಲ್ಲೂಕಿನ ಪಕ್ಷದ ಎಲ್ಲ ಜನಪ್ರತಿನಿಧಿಗಳು ಒಂದು ಗಂಟೆಯ ಕಾಲಮಿತಿಯೊಳಗೆ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ನಗರ ಘಟಕದ ಬಿಜೆಪಿ ಅಧ್ಯಕ್ಷ ಬಿ.ವಿ. ಭೈರೇಗೌಡ ಎಚ್ಚರಿಸಿದ್ದಾರೆ.
ಸಚಿವ ಆರ್. ಅಶೋಕ್ ನೀಡಿರುವ ಶಿಸ್ತು ಕ್ರಮ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯನ್ನು ತಾಲ್ಲೂಕಿನಲ್ಲಿ ಕಟ್ಟಿ ಬೆಳೆಸುವಾಗ ಬಚ್ಚೇಗೌಡರು ಬೇಕಾಗಿತ್ತು. ಈಗ ಹಣವಂತ ಸಿಕ್ಕ ತಕ್ಷಣ ನಮ್ಮನ್ನು ಕಡೆಗಣಿಸಲಾಗುತ್ತಿದೆ. ರಾಜ್ಯದಲ್ಲಿ ಪಕ್ಷಕ್ಕೆ ಶಕ್ತಿಯಿಲ್ಲದ ಕಡೆಗಳಲ್ಲಿ ಬದಲಿ ವ್ಯಕ್ತಿಗಳನ್ನು ತೆಗೆದುಕೊಳ್ಳಲಿ. ಅದನ್ನು ಬಿಟ್ಟು ಕಡಿಮೆ ಅಂತರದಿಂದ ಸೋತ ಮತ್ತು ಪಕ್ಷ ಪ್ರಬಲವಾಗಿರುವ ಕಡೆಗಳಲ್ಲಿ ಹೊರಗಿನಿಂದ ವ್ಯಕ್ತಿಗಳನ್ನು ತೆಗೆದುಕೊಂಡು ನಿಷ್ಠಾವಂತರನ್ನು ಕಡೆಗಣಿಸುವುದು ಸರಿಯಲ್ಲ’ ಎಂದರು.
ಉಚ್ಚಾಟಿಸಿದರೆ ನಾನು ಸ್ವತಂತ್ರವಾಗಿ ಚುನಾವಣೆಯಲ್ಲಿ ನಿಲ್ಲುವುದು ಖಂಡಿತ ಎಂದು ಶರತ್ ಬಚ್ಚೇಗೌಡ ಅವರು ವರಿಷ್ಠರಿಗೆ ತಿಳಿಸಿದ್ದಾರೆ. ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಸುಬ್ಬರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.