ಆನೇಕಲ್ : ಕಾಸು ಕೊಟ್ಟು ಪೊರಕೆ–ಮೊರದಲ್ಲಿ ಹೊಡೆಸಿಕೊಳ್ಳುವ ವಿಶಿಷ್ಟ ಆಚರಣೆ ಆನೇಕಲ್ ತಾಲ್ಲೂಕಿನ ಮಾಯಸಂದ್ರ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿ ಕರಗ ಮಹೋತ್ಸವ ಸಾಕ್ಷಿಯಾಯಿತು.
ಮಂಗಳವಾರ ನಡೆದ ಕೋಟೆ ಜಗಳವೆಂಬ ಧಾರ್ಮಿಕ ಆಚರಣೆಯಲ್ಲಿ ವಿವಿಧ ಗ್ರಾಮಗಳ ಸಹಸ್ರಾರು ಭಕ್ತರು ಕೋಟೆ ಜಗಳದಲ್ಲಿ ಭಾಗಿಗಳಾಗಿದ್ದರು.
ಕೋಟೆ ಜಗಳದ ಪ್ರಮುಖ ಆಚರಣೆಯೆಂದರೆ ಪೊರಕೆ ಮೊರದಲ್ಲಿ ಹೊಡೆಸಿಕೊಳ್ಳುವುದು. ದೇವಾಲಯಕ್ಕೆ ವ್ಯಕ್ತಿಯೊಬ್ಬರು ಪೊರಕೆ ಮೊರವನ್ನಿಡಿದು ಸುತ್ತುತ್ತಿರುತ್ತಾರೆ. ಜನರು ಹಣ ನೀಡಿ ಪೊರಕೆ ಮೊರದಲ್ಲಿ ಹೊಡೆಸಿಕೊಳ್ಳುತ್ತಾರೆ. ಈ ವ್ಯಕ್ತಿಯು ಸುತ್ತು ಹಾಕುತ್ತಾ ಬರುತ್ತಿದ್ದಂತೆ ಗಡಿಯ ಹೊರಗಡೆ ನಿಂತಿರುವ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಹಣ ನೀಡಿ ಪೊರಕೆ, ಮೊರದಲ್ಲಿ ಹೊಡೆಸಿಕೊಳ್ಳಲು ಮುಗಿದ್ದರು.
ಕರಗ ಮಹೋತ್ಸವ ಆಚರಣೆಯು ಮಹಾಭಾರತದ ಹಲವು ಘಟನೆಗಳನ್ನು ನೆನಪಿಸುತ್ತದೆ. ಅರ್ಜುನ ಮರ ಏರುವುದು, ವೀರ ಅಭಿಮನ್ಯು ಚಕ್ರವ್ಯೂಹ ಭೇದಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿರುತ್ತದೆ. ಕೋಟೆ ಜಗಳ ಅಥವಾ ವೀರ ಅಭಿಮನ್ಯು ಪದ್ಮವ್ಯೂಹ ಭೇದಿಸುವುದು ಎಂಬ ಆಚರಣೆ ಸಂದರ್ಭದಲ್ಲಿ ಈ ಸ್ಥಳದಲ್ಲಿ ಕೃಷ್ಣ, ದ್ರೌಪದಿ, ಪಾಂಡವರ ಉತ್ಸವ ಮೂರ್ತಿಗಳನ್ನು ಇಡಲಾಗಿತ್ತು.
ಕರಗ ಹೊತ್ತ ಗುರುಮೂರ್ತಿ ಅವರು ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಬಂದಿದ್ದ ಭಕ್ತರನ್ನು ಹರಸಿದಿರು. ಗಡಿಯ ಸುತ್ತಲೂ ಸುತ್ತುವ ಸಂದರ್ಭದಲ್ಲಿ ದೇವರುಗಳ ಉತ್ಸವ ಮೂರ್ತಿಗಳ ಮೆರವಣಿಗೆ ಹಾಗೂ ಗಂಟೆಯ ನೀನಾದ ನಿರಂತರವಾಗಿ ನಡೆಯುತ್ತಿತ್ತು.
ಬಲರಾಮ ಶಿರಚ್ಛೇದನ: ಮಾಯಸಂದ್ರ ಕರಗ ಮಹೋತ್ಸವದ ಪ್ರಯುಕ್ತ ಸ್ಥಾಪಿಸಲಾಗಿದ್ದ ಬಲರಾಮನನ್ನು ಕೋಟೆ ಜಗಳದಲ್ಲಿ ಶಿರಚ್ಛೇದನ ಮಾಡಲಾಯಿತು. ಭಾನುವಾರ ಮಾಯಸಂದ್ರ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಬಲರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಮಂಗಳವಾರ ನಡೆದ ಕೋಟೆ ಜಗಳದ ಆಚರಣೆಯ ಅಂಗವಾಗಿ ಬಲರಾಮ ಶಿರಚ್ಛೇದನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.