ದೇವನಹಳ್ಳಿ: ನಗರದ ಶಕ್ತಿ ದೇವತೆ ಮೌಕ್ತಿಕಾಂಬಾ ಅಮ್ಮನವರ ಕರಗ ಮಹೋತ್ಸವ ಮೇ 18ರಂದು ರಾತ್ರಿ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ವಿಜಯಕುಮಾರ್ ತಿಳಿಸಿದರು.
ಇಲ್ಲಿನ ಮೌಕ್ತಿಕಾಂಬಾ ದೇವಿ ದೇವಾಲಯ ಆಡಳಿತ ಕಚೇರಿಯಲ್ಲಿ ಕರಗ ಮಹೋತ್ಸವದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
‘1836ರಲ್ಲಿ ಆರಂಭವಾದ ಕರಗದ ಇತಿಹಾಸದ ದಾಖಲೆಗಳಿವೆ. ಬ್ರಿಟಿಷರ ಅನುಮತಿ ಪಡೆದು ಕರಗ ನಡೆಸಲಾಗುತ್ತಿತ್ತು. ಒಂದೆರಡು ಬಾರಿ ಕರಗಕ್ಕೆ ಬ್ರಿಟಿಷರು ನಿರಾಕರಿಸಿದ್ದರು. 1947ರಿಂದ ಯಥಾವತ್ತಾಗಿ ಶ್ರದ್ಧಾ ಭಕ್ತಿಯಿಂದ ಕರಗ ನಡೆಸಲಾಗುತ್ತಿದೆ’ ಎಂದು ಹೇಳಿದರು.
‘ಮೇ 10ರಿಂದ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿವೆ. ಮೇ 16ರಂದು ಬೆಳೆಗಿನ ಜಾವ 4ಕ್ಕೆ ಹಸಿ ಕರಗ ನಡೆಯಲಿದೆ. 17ರಂದು ರಾತ್ರಿ 8ಕ್ಕೆ ಆರತಿ ದೀಪಗಳು ಮತ್ತು ಅಗ್ನಿಕುಂಡ, 18ರಂದು ರಾತ್ರಿ 1ಕ್ಕೆ ಕರಗ ಮಹೋತ್ಸವ ಆರಂಭಗೊಳ್ಳಲಿದೆ. ಐದುನೂರಕ್ಕೂ ಹೆಚ್ಚು ವೀರಗಾರರು ಕರಗ ಮಹೋತ್ಸವಕ್ಕೆ ಸಾಥ್ ನೀಡಲಿದ್ದಾರೆ. ಮೇಲಿನ ತೋಟದ ಪೂಜಾರಿ ಕೃಷ್ಣಪ್ಪ ಅವರ ಮಗ ರವಿಕುಮಾರ್ ಈ ಬಾರಿಯೂ ಕರಗ ಹೊರಲಿದ್ದಾರೆ’ ಎಂದು ಹೇಳಿದರು.
16ರಂದು ವಿನಾಯಕ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ರಾತ್ರಿ 9.30ಕ್ಕೆ ‘ಸರ್ಪಲಾಂಛನ’ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. 18ರಂದು ರಾತ್ರಿ ರಂಗನಾಥ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ‘ಶ್ರೀಕೃಷ್ಣ ರಾಯಭಾರ’ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ. ಕರಗ ಮುಗಿದ ಮೇಲೆ ಅನ್ನ ಸಂತರ್ಪಣೆ ನಡೆಯಲಿದೆ’ ಎಂದರು.
ಕಾರ್ಯದರ್ಶಿ ಕೃಷ್ಣಪ್ಪ ಮತ್ತು ಖಜಾಂಚಿ ಗೋಪಾಲಪ್ಪ, ಆಡಳಿತ ಮಂಡಳಿ ಉಪಾಧ್ಯಕ್ಷ ರಾಮಕೃಷ್ಣ, ಸದಸ್ಯರಾದ ಕಾಂತರಾಜು, ವಹ್ನಿಕುಲ ತಿಗಳ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಗೋಪಾಲಕೃಷ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.