ದೇವನಹಳ್ಳಿ: ‘ಕಳೆದ ಎಂಟು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತ ಹಾಗೂ ನಗರ ಘಟಕ ಅಧ್ಯಕ್ಷನಾಗಿದ್ದೆ. ಒಂದಿಬ್ಬರು ನಾಯಕರು ನೀಡಿದ ಮಾನಸಿಕ ಕಿರುಕುಳದಿಂದ ಸ್ವಚ್ಛೆಯಿಂದ ಬಿಜೆಪಿ ಬಿಟ್ಟು ಜೆಡಿಎಸ್ಗೆ ಸೇರ್ಪಡೆಯಾಗಿದ್ದೇನೆ’ ಎಂದು ನಿಲೇರಿ ಮಂಜುನಾಥ್ ತಿಳಿಸಿದರು.
ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಪುರಸಭೆ 10 ನೇ ವಾರ್ಡಿನ 12ಕ್ಕೂ ಹೆಚ್ಚು ಬಿಜೆಪಿ ಮುಖಂಡರ ಜೆಡಿಎಸ್ಗೆ ಸೇರ್ಪಡೆ ಕುರಿತು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಲವು ವರ್ಷದಿಂದ ಪುರಸಭೆ ಒಟ್ಟು 23 ವಾರ್ಡುಗಳಲ್ಲಿ ಯುವ ಪಡೆಯ ಮೂಲಕ ಬಿಜೆಪಿ ಬಲ ಪಡಿಸಿದ್ದೇನೆ. ಸಂಘಟಿತವಾಗಿ ಕೆಲಸ ಮಾಡಿದ ನನಗೆ 23 ವಾರ್ಡುಗಳಲ್ಲಿ ಯಾವುದೇ ವಾರ್ಡ್ನಿಂದ ಸ್ವರ್ಧಿಸಲು ಕೆಲ ಮುಖಂಡರು ನಿರಾಕರಿಸಿದರು. ಬೇಸತ್ತು ನೋವಿನಿಂದ ಪಕ್ಷ ಬಿಟ್ಟು ಬಂದಿದ್ದೇನೆ’ ಎಂದು ಹೇಳಿದರು.
‘ಜೆಡಿಎಸ್ ಪಕ್ಷದಲ್ಲಿ ನಾನು ಯಾವುದೇ ಹುದ್ದೆಯನ್ನು ನಿರೀಕ್ಷೆ ಮಾಡಿಲ್ಲ. ಪಕ್ಷ ಉತ್ತಮವಾಗಿ ನಡೆಸಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ. ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ ‘ಪುರಸಭೆ ವ್ಯಾಪ್ತಿಯಲ್ಲಿ ಹಲವಾರು ಸಮಸ್ಯೆಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಒಳ ಚರಂಡಿ ವ್ಯವಸ್ಥೆ, ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪೂರೈಕೆಯಾಗುತ್ತಿರುವ ಕಾವೇರಿ ಕುಡಿಯುವ ನೀರು ದೇವನಹಳ್ಳಿಗೆ ತರುವ, ತಾಲ್ಲೂಕು ಕೇಂದ್ರದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗುವ ಕೆಲವಾಗಬೇಕು’ ಎಂದು ಹೇಳಿದರು.
ಜೆಡಿಎಸ್ ನಗರ ಘಟಕ ಅಧ್ಯಕ್ಷ ಮುನಿನಂಜಪ್ಪ ಮಾತನಾಡಿದರು. ಜೆಡಿಎಸ್ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ರವೀಂದ್ರ, ಯುವ ಘಟಕ ಅಧ್ಯಕ್ಷ ಭರತ್, ಪ್ರಚಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಎಸ್ಟಿ ಘಟಕ ಅಧ್ಯಕ್ಷ ನಾಗೇಶ್, ಮುಖಂಡರಾದ ವೈ.ಸಿ ಸತೀಶ್, ರವಿಕುಮಾರ್, ಸೋಮಣ್ಣ , ಎಸ್.ಎನ್.ನಾರಾಯಯನಸ್ವಾಮಿ, ಎಂ.ಕುಮಾರ್, ಮುನಿರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.