ADVERTISEMENT

ದುಡಿಮೆಯತ್ತ ವಲಸೆ ಮಕ್ಕಳ ಚಿತ್ತ

ಆನ್‌ಲೈನ್‌ ಶಿಕ್ಷಣ ಅಸಾಧ್ಯ, ಪೋಷಕರಿಗೆ ನೆರವಾಗುವ ಇಂಗಿತ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 2:51 IST
Last Updated 6 ಅಕ್ಟೋಬರ್ 2020, 2:51 IST
ವಿಜಯಪುರ ಹೋಬಳಿ ಚಂದೇನಹಳ್ಳಿ ಗೇಟ್ ನಲ್ಲಿ ಆಯುರ್ವೆದಿಕ್ ಎಣ್ಣೆ ಮಾರಾಟದಲ್ಲಿ ತೊಡಗಿಸಿಕೊಂಡಿರುವ ವಲಸೆ ಕಾರ್ಮಿಕರ ಮಕ್ಕಳು
ವಿಜಯಪುರ ಹೋಬಳಿ ಚಂದೇನಹಳ್ಳಿ ಗೇಟ್ ನಲ್ಲಿ ಆಯುರ್ವೆದಿಕ್ ಎಣ್ಣೆ ಮಾರಾಟದಲ್ಲಿ ತೊಡಗಿಸಿಕೊಂಡಿರುವ ವಲಸೆ ಕಾರ್ಮಿಕರ ಮಕ್ಕಳು   

ವಿಜಯಪುರ: ಕೊರೊನಾ ಸಂಕಷ್ಟದ ನಡುವೆ ವಲಸೆ ಕಾರ್ಮಿಕರ ಮಕ್ಕಳು ಆನ್ ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಅವರೀಗ ಬೀದಿಯಲ್ಲಿ ಕುಳಿತು ಆಯುರ್ವೆದ ಎಣ್ಣೆ ಮಾರಾಟ ಮಾಡಿ ತಮ್ಮ ಕುಟುಂಬದವರಿಗೆ ನೆರವಾಗುತ್ತಿದ್ದಾರೆ.

ರಾಜ್ಯದಲ್ಲಿ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆಯಿದ್ದು, ಹಳ್ಳಿಗಳಲ್ಲಿ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲು ಶಕ್ತಿಯಿಲ್ಲದ ಮಕ್ಕಳು ಕೂಲಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿರುವಂತಹ ದೃಶ್ಯಗಳು ಕಂಡುಬರುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಬಹಳಷ್ಟು ಮಕ್ಕಳು ಶಿಕ್ಷಣದಲ್ಲಿ ಆಸಕ್ತಿ ಕಳೆದುಕೊಂಡು ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಶಾಲೆಗಳನ್ನೇ ಮರೆಯುವ ಸಾಧ್ಯತೆ ಇದೆ ಎಂದು ಶಿಕ್ಷಣ ಪ್ರೇಮಿ ಕೆ.ಎನ್.ಮುನೀಂದ್ರ ಆತಂಕ ವ್ಯಕ್ತಪಡಿಸಿದರು.

‘ಮನೆಯಲ್ಲಿನ ಬಡತನ, ಶಾಲೆ ಆರಂಭವಾಗದಿರುವುದು ಸೇರಿದಂತೆ ಕೆಲವೊಂದು ಅನಿವಾರ್ಯ ಕಾರಣಗಳಿಂದ ಮಕ್ಕಳು ದುಡಿಮೆಯಲ್ಲಿ ತೊಡಗಿದ್ದಾರೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಹಾಗೂ ಮಕ್ಕಳ ಸಹಾಯವಾಣಿಯ ಸಿಬ್ಬಂದಿ ಗ್ಯಾರೇಜ್ ಗಳಿಗೆ ದಾಳಿ ನಡೆಸಿ, ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದ ಮಕ್ಕಳ ಪೋಷಕರಿಗೆ ಹಾಗೂ ಗ್ಯಾರೇಜುಗಳ ಮಾಲೀಕರಿಗೆ ಎಚ್ಚರಿಕೆ ನೀಡಿರುವುದು ಸ್ವಾಗತಾರ್ಹ. ಗ್ರಾಮೀಣ ಭಾಗದಲ್ಲಿ ಕೆಲಸ ಕಲಿಯಲಿ ಎನ್ನುವ ಉದ್ದೇಶದಿಂದ ರೈತರು, ಮಕ್ಕಳನ್ನು ಕೃಷಿ ಚಟುವಟಿಕೆಗಳಿಗೆ ದುಡಿಸಿಕೊಳ್ಳುತ್ತಿರುವುದನ್ನು ಗಮನಿಸಿ ಇಲಾಖೆಯವರು ಪೋಷಕರಿಗೆ ಎಚ್ಚರಿಕೆ ನೀಡಬೇಕು’ ಎಂದರು.

ADVERTISEMENT

ತಾಲ್ಲೂಕು ಕಾರ್ಮಿಕ ಇಲಾಖೆಯ ನಿರೀಕ್ಷಕಿ ಅಂಬಿಕಾ ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ಶಾಲೆಗೆ ರಜೆ ಇದೆ ಎನ್ನುವ ಕಾರಣದಿಂದ ದುಡಿಸಿಕೊಳ್ಳುವುದು ಅಪರಾಧ. ಈ ಬಗ್ಗೆ ಯಾರೇ ಮಾಹಿತಿ ನೀಡಿದರೂ ತಕ್ಷಣ ದಾಳಿ ನಡೆಸಲಾಗುತ್ತದೆ. ಮಾಹಿತಿ ನೀಡಿದವರ ಬಗ್ಗೆ ಗೌಪ್ಯತೆ ಕಾಪಾಡಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.