ADVERTISEMENT

ಎಂ.ಟಿ.ಬಿ. ನಾಗರಾಜ್ ವಿರುದ್ಧ ಅವಹೇಳನಕಾರಿ ಹೇಳಿಕೆ: ವ್ಯಕ್ತಿ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 13:49 IST
Last Updated 31 ಅಕ್ಟೋಬರ್ 2019, 13:49 IST
   

ಹೊಸಕೋಟೆ: ಹರಳೂರಿನ ರವಿ ಎಂಬ ವ್ಯಕ್ತಿ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಅವರ ವಿರುದ್ಧ ಅವಹೇಳನಕಾರಿ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ವಿಷಯಕ್ಕೆ ಸಂಬಂಧಪಟ್ಟಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ನೀಡಿದ ದೂರಿನ ಆಧಾರದಲ್ಲಿ ಇಲ್ಲಿನ ಪೊಲೀಸರು ರವಿಯನ್ನು ಬಂಧಿಸಿ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಹಾಗೂ ಕಾಂಗ್ರೆಸ್ ಬೆಂಬಲಿಗರು ಠಾಣೆ ಮುಂದೆ ಜಮಾಯಿಸಿದರು. ಈ ವೇಳೆ ಠಾಣೆಯ ಅಧಿಕಾರಿ ರಾಜು ಮಾತನಾಡಿ ‘ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸುದ್ದಿಯ ಆಧಾರದಲ್ಲಿ ಯಾರನ್ನೂ ಬಂಧಿಸಲಾಗುವುದಿಲ್ಲ. ನ್ಯಾಯಾಲಯದ ಆದೇಶವಿದ್ದರೆ ಮಾತ್ರ ಅವರನ್ನು ಬಂಧಿಸಬಹುದು. ರವಿಯನ್ನು ಕೇವಲ ವಿಚಾರಣೆಗಾಗಿ ಕರೆತಂದಿದ್ದೇವೆ’ ಎಂದು ತಿಳಿಸಿ ನಂತರ ರವಿಯನ್ನು ಬಿಡುಗಡೆ ಮಾಡಿದರು.

ಶಾಸಕ ಬೈರತಿ ಸುರೇಶ್ಮಾತನಾಡಿ, ‘ಎಂ.ಟಿ.ಬಿ. ನಾಗರಾಜ್ ಅಧಿಕಾರಿಗಳಿಗೆ ಬೆದರಿಕೆ ಹಾಕಿ ನಮ್ಮ ಕಾರ್ಯಕರ್ತರನ್ನು ಅನವಶ್ಯಕವಾಗಿ ಬಂಧಿಸಿ, ಕಿರುಕುಳ ಕೊಡುತ್ತಿದ್ದಾರೆ. ರವಿ ತನಗೆ ಬಂದ ವಿಷಯವನ್ನು ಕೇವಲ ಫಾರ್ವಡ್ ಮಾಡಿದ್ದಾನೆ. ಅದಕ್ಕೆ ಅವನನ್ನು ಬಂಧಿಸಿ ಬಿಜೆಪಿಯವರು ತಾಲ್ಲೂಕಿನಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದು, ಅದಕ್ಕೆ ತಮ್ಮ ಪಕ್ಷದ ಯಾವುದೇ ಕಾರ್ಯಕರ್ತ ಬೆದರುವುದಿಲ್ಲ. ಈ ಬಾರಿ ಬಿಜೆಪಿಯನ್ನು ತಾಲ್ಲೂಕಿನಿಂದ ಓಡಿಸುತ್ತೇವೆ’ ಎಂದರು.

ADVERTISEMENT

ಠಾಣೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್ ಮಾತನಾಡಿ, ‘ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವ್ಯಕ್ತಿಯ ಬಗ್ಗೆ ಅವಹೇಳನಕಾರಿ ಅಥವಾ ಸುಳ್ಳು ಸುದ್ದಿಯನ್ನು ಹಾಕುವುದಾಗಲಿ ಅಥವಾ ಅಂತಹ ಸುದ್ದಿಯನ್ನು ಮತ್ತೊಬ್ಬರಿಗೆ ಕಳುಹಿಸುವುದಾಗಲಿ ಮಾಡಿದರೆ ಅಂತಹ ವ್ಯಕ್ತಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಅಂತಹ ಗ್ರೂಪ್ ಅಡ್ಮಿನ್‌ಗಳ ವಿರುದ್ಧವೂ ಕೇಸ್‌ ದಾಖಲಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.