ಹೊಸಕೋಟೆ: ನಗರದಲ್ಲಿ ಶುಕ್ರವಾರ ನಡೆದ ಕನಕ ಸಮೃದ್ಧಿ ಕೋ ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭವು ರಾಜಕೀಯವಾಗಿ ವಿರೋಧಿಗಳಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಎಂ.ಟಿ.ಬಿ ನಾಗರಾಜ್ ಅವರ ಮುಖಾಮುಖಿಗೆ ವೇದಿಕೆಯಾಯಿತು.
ಸೊಸೈಟಿಯ ಉದ್ಘಾಟನೆಗೆ ಬಂದಿದ್ದ ಸಿದ್ದರಾಮಯ್ಯ ಅವರು ಎಂ.ಟಿ.ಬಿ ನಾಗರಾಜ್ ಅವರೊಟ್ಟಿಗೆ ಒಂದೇ ಟೇಬಲ್ನಲ್ಲಿ ಕುಳಿತು ಊಟ ಮಾಡಿ ಕುಶಲೋಪರಿ ವಿಚಾರಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ತಡವಾಗಿ ಬಂದರು. ಅವರ ಬರುವಿಕೆಗಾಗಿ ಎಂ.ಟಿ.ಬಿ ನಾಗರಾಜ್ ಕಾದು ಕುಳಿತಿದ್ದರು. ಜತೆಯಲ್ಲಿಯೇ ಊಟ ಮಾಡಿದ ಬಳಿಕ ಕಾರ್ಯಕ್ರಮಕ್ಕೂ ಅವರ ಜತೆಯಲ್ಲಿಯೇ ಸಾಗಿದರು. ಇದೇ ವೇಳೆ ಸಚಿವರ ಬೆಂಬಲಿಗರು ನಾಗರಾಜ್ಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಅವರ ಮುಂದೆಯೇ ಘೋಷಣೆ ಕೂಗಿದರು.
ಸಚಿವರ ಸ್ಪಷ್ಟನೆ: ‘ಸಮುದಾಯದ ಕನಕ ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಾರಂಭಿಸಲಾಗಿದೆ. ಇದರ ಉದ್ಘಾಟನೆಗಾಗಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿತ್ತು. ಇದೇ ಸಂದರ್ಭದಲ್ಲಿ ಆಯೋಜಕರು ಊಟದ ವ್ಯವಸ್ಥೆ ಮಾಡಿದ್ದರು. ಆಗ ನಾವಿಬ್ಬರೂ ಒಂದೇ ಟೇಬಲ್ನಲ್ಲಿ ಭೋಜನ ಮಾಡಿದ್ದು ಬಿಟ್ಟರೆ ಮತ್ತೇನೂ ವಿಶೇಷತೆ ಇಲ್ಲ. ಅದನ್ನು ರಾಜಕೀಯವಾಗಿ ನೋಡುವುದು ಬೇಡ’ ಎಂದು ಸಚಿವ ನಾಗರಾಜ್ ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.