ಹೊಸಕೋಟೆ: ತಮಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲವಿದ್ದು ನಾನು ಕಳೆದ 18 ವರ್ಷಗಳಿಂದ ಮಾಡಿರುವ ಅಭಿವೃದ್ದಿ ಕಾರ್ಯಕ್ರಮಗಳ ಕಾರಣಕ್ಕಾಗಿ ತಾಲ್ಲೂಕಿನ ಜನತೆ ತಮ್ಮನ್ನು ಖಂಡಿತವಾಗಿ ಬೆಂಬಲಿಸುತ್ತಾರೆ ಎಂದು ಹೊಸಕೋಟೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಎಂ.ಟಿ.ಬಿ. ನಾಗರಾಜ್ ತಿಳಿಸಿದರು.
ಇಂದು ಒಳ್ಳೆಯ ದಿನವಾದ್ದರಿಂದ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಸೋಮವಾರ ಇನ್ನೊಂದು ಬಾರಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.
‘ನಾನು ಬಿಜೆಪಿಯ ಅಧಿಕೃತ ಅಭ್ಯರ್ಥಿ. ಬಿ.ಎನ್.ಬಚ್ಚೇಗೌಡರು ಇದೇ ಪಕ್ಷದ ಸಂಸದರಾಗಿರುವುದರಿಂದ ಅವರು ಚುನಾವಣಾ ಪ್ರಚಾರಕ್ಕೆ ಬರಲೇಬೇಕು ಎಂದರು. ಕುಮಾರಸ್ವಾಮಿ ಅವರು ಶರತ್ ಬಚ್ಚೇಗೌಡರಿಗೆ ಬೆಂಬಲ ಕೊಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ಯಾರ ಪರವಾಗಿ ಪ್ರಚಾರ ಮಾಡಿದರೂ ನಾನು ಮತ್ತು ಬಿಜೆಪಿಯ ಕಾರ್ಯಕರ್ತರು ತಾಲ್ಲೂಕಿನಲ್ಲಿ ಪ್ರಚಾರ ಮಾಡುತ್ತೇವೆ’ ಎಂದರು.
ಸೇರ್ಪಡೆ ಕಾರ್ಯಕ್ರಮಕ್ಕೆ ಗೈರು ಹಾಜರಿ ಬಗ್ಗೆ ಮಾತನಾಡಿ, ರಾಹುಕಾಲಕ್ಕಿಂತ ಮುಂಚಿತವಾಗಿ ನಾಮಪತ್ರ ಸಲ್ಲಿಸುವ ಸಲುವಾಗಿ ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲ. ಆದರೆ ತಾವು ಈಗಾಗಲೇ ಬಿಜೆಪಿಯ ಸದಸ್ಯತ್ವ ಪಡೆದಿರುವುದಾಗಿ ತಿಳಿಸಿದರು.
ನಾಮಪತ್ರದ ಸಲ್ಲಿಕೆಯ ವೇಳೆ ಪಕ್ಷದ ಬಿ ಫಾರಂ ಕೊಡದಿರುವ ಬಗ್ಗೆ ಚುನಾವಣಾಧಿಕಾರಿ ಎಚ್.ಎಲ್. ನಾಗರಾಜ್ ಗಮನಕ್ಕೆ ತಂದರು. 18ರಂದು ಮಧ್ಯಾಹ್ನ 3ಗಂಟೆಯ ಒಳಗಾಗಿ ಸಲ್ಲಿಸುವಂತೆ ನಾಗರಾಜ್ ತಿಳಿಸಿದರು.
ನಾಮಪತ್ರ ಸಲ್ಲಿಕೆಯ ವೇಳೆ ಪತ್ನಿ ಶಾಂತಮ್ಮ, ಮಗ ನಿತಿನ್ ಪುರುಷೋತ್ತಮ್, ರಾಜ್ಯ ತಿಗಳರ ಸಂಘದ ಅಧ್ಯಕ್ಷ ಸಿ.ಜಯರಾಜ್ ಹಾಗೂ ಬೆಂಬಲಿಗರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.