ಆನೇಕಲ್: ಪ್ರಿಯಕರನನ್ನು ಹತ್ಯೆ ಮಾಡಿದ್ದ ಗಂಡ ಹೆಂಡತಿಯನ್ನು ತಾಲ್ಲೂಕಿನ ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ದಾವಣಗೆರೆಯಿಂದ ಬಂದು ನೆಲೆಸಿರುವ ಸುರೇಖಾ (38) ಮತ್ತು ಮುನ್ನಾ (41) ಎಂದು ಗುರುತಿಸಲಾಗಿದೆ.
ನವೆಂಬರ್ 18ರಂದು ಜಿಗಣಿ ಎಪಿಸಿ ಸರ್ಕಲ್ ಬಳಿ ಕಿರಣ್ಕುಮಾರ್ (25) ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಜಿಗಣಿ ಪೊಲೀಸರು ಹತ್ಯೆಯ ಜಾಡು ಹಿಡಿದು ತೆರಳಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಭದ್ರಾವತಿಯಿಂದ ಬಂದು ನೆಲೆಸಿರುವ ಕಿರಣ್, ಸುರೇಖಾಗೆಫೇಸ್ಬುಕ್ನಲ್ಲಿ ಪರಿಚಯವಾಗಿದ್ದರು. ಅವರನ್ನು ಪ್ರೀತಿಸಿ ಕೊನೆಗೆ ಗಂಡ ಮತ್ತು ಮಕ್ಕಳನ್ನು ಬಿಟ್ಟು ಎರಡನೇ ವಿವಾಹವಾಗಿದ್ದಳು ಎನ್ನಲಾಗಿದೆ. ಈ ನಡುವೆ ಕಿರಣ್ ತನ್ನ ಸಂಬಂಧಿಯೊಬ್ಬರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಇದರಿಂದ ಕುಪಿತಗೊಂಡ ಸುರೇಖಾ ಹಳೆಯ ಗಂಡ ಮುನ್ನಾನೊಂದಿಗೆ ಸೇರಿ ಪ್ರಿಯಕರನನ್ನು ಹತ್ಯೆ ಮಾಡಲು ಸಂಚು ಮಾಡಿದ್ದಳು. ಎಪಿಸಿ ಸರ್ಕಲ್ನ ಮನೆಯೊಂದರ ಕೊಠಡಿಯಲ್ಲಿ ಹತ್ಯೆ ಮಾಡಿ ಬೆಳಗಾವಿ ಕಡೆ ಪರಾರಿಯಾಗಿದ್ದರು. ಸರ್ಕಲ್ ಇನ್ಸ್ಪೆಕ್ಟರ್ ಕೆ.ವಿಶ್ವನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಜಾಡು ಹಿಡಿದು ಕೇವಲ ಮೂರು ದಿನದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.