ADVERTISEMENT

‘ಗುರುಕುಲ ಮಾದರಿಯ ಶಿಕ್ಷಣ ಅಗತ್ಯ‘

ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರ ಮತ್ತು ಸಹಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 13:20 IST
Last Updated 4 ಆಗಸ್ಟ್ 2019, 13:20 IST
ಕಾರ್ಯಾಗಾರವನ್ನು ಶಾಸಕ ನಿಸರ್ಗ ನಾರಾಯಣ ಸ್ವಾಮಿ ಉದ್ಘಾಟಿಸಿದರು
ಕಾರ್ಯಾಗಾರವನ್ನು ಶಾಸಕ ನಿಸರ್ಗ ನಾರಾಯಣ ಸ್ವಾಮಿ ಉದ್ಘಾಟಿಸಿದರು   

ದೇವನಹಳ್ಳಿ: ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡುವ ಅಗತ್ಯವಿದೆ ಎಂದು ರಾಕುಂಜೀ ಶಾಲೆಯ ಸಂಸ್ಥಾಪಕ ರಾಕುಂ ಗುರೂಜಿ ಹೇಳಿದರು.

ಇಲ್ಲಿನ ರಾಕುಂಜೀ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ 2019–20ನೇ ಸಾಲಿನ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರ ಮತ್ತು ಸಹಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಶಿಕ್ಷಕರು ಮುಗ್ಧ ಮಕ್ಕಳನ್ನು ಶಿಲ್ಪಿಯ ರೀತಿಯಲ್ಲಿ ಸುಂದರ ವಿಗ್ರಹ ಮಾಡಿದಂತೆ ಮಾಡುವವರು ಶಿಕ್ಷಕರು. ಗುರು ಪರಂಪರೆ ಅನಾದಿಕಾಲದಿಂದ ಬಂದಿದೆ. ಗುರುಶಿಷ್ಯರ ಭಕ್ತಿ ಉಳಿಯಬೇಕು. ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರಂತರ ಓದಿನಲ್ಲಿ ತಲ್ಲೀನರಾಗುವಂತೆ ಮಾಡಬೇಕು. ಪೋಷಕರ ಆರ್ಥಿಕ ಸ್ಥಿತಿಗತಿಗಳನ್ನು ಮನವರಿಕೆ ಮಾಡಿದಾಗ ಮಕ್ಕಳಲ್ಲಿ ವ್ಯಾಸಂಗದ ಬಗ್ಗೆ ಆಸಕ್ತಿ ಹೆಚ್ಚಲಿದೆ’ ಎಂದು ಹೇಳಿದರು.

ADVERTISEMENT

‘ಶಿಕ್ಷಣ ಇಲಾಖೆಗಿಂತ ಹೆಚ್ಚಿನ ಸವಲತ್ತು ಇತರೆ ಇಲಾಖೆಯಲ್ಲಿನ ಅಧಿಕಾರಿಗಳಿಗೆ ಜಾಸ್ತಿ ಇದೆ. ಇಲ್ಲಿ ಸವಲತ್ತಿಗಿಂತ ಶಿಕ್ಷಣದ ವೃತ್ತಿ ಮೌಲ್ಯಾಧರಿತವಾದದ್ದು. ಗುಣಮಟ್ಟದ ಶಿಕ್ಷಣಕ್ಕೆ ತಮ್ಮದೇ ಚಿಂತನೆಯನ್ನಿಟ್ಟುಕೊಂಡು ಶಿಕ್ಷಕರು ಭೋದನೆ ಮಾಡಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್ ಮಾತನಾಡಿ, ‘ಈ ಹಿಂದಿನ ವರ್ಷದಲ್ಲಿ 10ನೇ ತರಗತಿಯ ವಾರ್ಷಿಕ ಫಲಿತಾಂಶ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲು ಸಹಕರಿಸಿದ ಶಿಕ್ಷಕರನ್ನು ಗುರುತಿಸುವ ಕೆಲಸ ಆಗಬೇಕಿತ್ತು. ಪ್ರತಿ ಶನಿವಾರ, ಭಾನುವಾರ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಆರಂಭದಲ್ಲಿ ಗುರುತಿಸಿ ವಿಶೇಷ ಬೋಧನೆಗೆ ಒತ್ತು ನೀಡುವಂತೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಹಿಂದಿನ 10ನೇ ತರಗತಿ ವಾರ್ಷಿಕ ಫಲಿತಾಂಶ ಗುಣಮಟ್ಟದಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಬಂದಿರುವುದು ಶ್ಲಾಘನೀಯವಾದರೂ ಮುಂದಿನ ಸಾಲಿನಲ್ಲಿ ಮೊದಲ ಸ್ಥಾನಕ್ಕೆ ಪ್ರಯತ್ನ ಪಡಬೇಕು’ ಎಂದು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ ವೀರೇಗೌಡ, ಮುಖ್ಯ ಶಿಕ್ಷಕರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.