ADVERTISEMENT

ನಿಜಗಲ್ ಬೆಟ್ಟದಲ್ಲಿ ನಿಧಿಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 19:35 IST
Last Updated 24 ಅಕ್ಟೋಬರ್ 2018, 19:35 IST

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ನಿಜಗಲ್ ಬೆಟ್ಟದಲ್ಲಿ (ಸಿದ್ಧರ ಬೆಟ್ಟ) ನಿಧಿಗಾಗಿ ಶೋಧ ನಡೆಸಲಾಗಿದೆ.

ಬೆಟ್ಟದ ಮೇಲಿರುವ ಪಾಳು ಬಿದ್ದ ಶ್ರೀಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ಮಂಗಳವಾರ ರಾತ್ರಿ ದೇವರ ಮೂರ್ತಿಯನ್ನು ತೆಗೆದು ಪಕ್ಕಕ್ಕೆ ಸರಿಸಿ, ಅಂದಾಜು ಇಪ್ಪತ್ತು ಅಡಿಗಳಷ್ಟು ಆಳಕ್ಕೆ ಭೂಮಿ ಅಗೆದಿದ್ದು, ನಿಧಿ ದೋಚಿರಬಹುದು ಎಂದು ಶಂಕಿಸಿ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಭೂಮಿ ಅಗೆದಿರುವ ಸ್ಥಳದಲ್ಲಿ ಸುತ್ತಲೂ ಅರಶಿಣ-ಕುಂಕುಮ ಎರಚಿದ್ದಾರೆ. ನಿಂಬೆ ಹಣ್ಣುಗಳನ್ನು ಕೊಯ್ದಿದ್ದಾರೆ. ಇಪ್ಪತ್ತು ಬೂದುಗುಂಬಳ ಕಾಯಿಗಳನ್ನು ಒಡೆದು ಪೂಜೆ ಸಲ್ಲಿಸಲಾಗಿದೆ.

ಕೆಲವು ವರ್ಷಗಳ ಹಿಂದೆ ಬೆಟ್ಟದ ತಪ್ಪಲಿನಲ್ಲಿ ನಿಧಿ ಕಳ್ಳನೊಬ್ಬನನ್ನು ಬಂಧಿಸಲಾಗಿತ್ತು. ಮತ್ತೊಬ್ಬ ನಿಗೂಢವಾಗಿ ಹತ್ಯೆಯಾಗಿದ್ದ. ಆಗಿನಿಂದ ಇಲ್ಲಿ ನಿಧಿ ಶೋಧ ಕಾರ್ಯ ತಹಬಂದಿಗೆ ಬಂದಿತ್ತು. ಮತ್ತೆ ಇಂಥ ಕೃತ್ಯ ಮುಂದುವರಿದಿದೆ. ಜಿಲ್ಲಾ ಮತ್ತು ತಾಲ್ಲೂಕು ಆಡಳಿತವು ಪೊಲೀಸ್ ಇಲಾಖೆಯ ನೆರವಿನೊಂದಿಗೆ ಇದಕ್ಕೆ ನಿಯಂತ್ರಣ ಹಾಕಬೇಕಿದೆ ಎಂದು ಆಗ್ರಹಿಸುತ್ತಾರೆ ನಿಜಗಲ್ ಸಿದ್ಧರಬೆಟ್ಟ ಅಭಿವೃದ್ಧಿ ಸಮಿತಿಯವರು. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.