
ಬಂಧನ
ದೇವನಹಳ್ಳಿ: ₹30 ಲಕ್ಷ ನಗದು ತಂದುಕೊಟ್ಟರೆ ₹90 ಲಕ್ಷ ನೀಡುವುದಾಗಿ ಹೇಳಿ ಆಮಿಷವೊಡ್ಡಿದ ಗುಂಪೊಂದು ದೇವನಹಳ್ಳಿಯಲ್ಲಿ ನಗದು ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದ್ದು, ಈ ಕುರಿತು ಕೆ. ಶಂಕರಪ್ಪ (50) ದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಹೊಸಕೋಟೆಯ ಶರೀಪ್ ಎಂಬಾತ ‘ಗೋದಾಮಿನಲ್ಲಿ ಹಣ ಇದೆ, ₹30 ಲಕ್ಷ ಹೂಡಿದರೆ 10 ತಿಂಗಳಲ್ಲಿ ₹90 ಲಕ್ಷವಾಗಿ ಖಾತೆಗೆ ಜಮಾ ಮಾಡುತ್ತೇವೆ’ ಎಂದು ನಂಬಿಸಿ, ದೇವನಹಳ್ಳಿಯ ಆಕಾಶ್ ಆಸ್ಪತ್ರೆ ಸಮೀಪಕ್ಕೆ ಕರೆಸಿಕೊಂಡಿದ್ದಾನೆ.
ಹಣದ ವ್ಯವಸ್ಥೆಗಾಗಿ ಶಂಕರಪ್ಪ ತಮ್ಮ ಹಾಗೂ ಪತ್ನಿಯ ಚಿನ್ನಾಭರಣಗಳನ್ನು ಅಡಮಾನ ಇಟ್ಟು, ಸ್ನೇಹಿತರ ಸಹಾಯದಿಂದ ₹30 ಲಕ್ಷ ಒಗ್ಗೂಡಿಸಿದ್ದಾರೆ. ಫೆ. 13ರಂದು ಬೆಳಿಗ್ಗೆ ಕಾರಿನಲ್ಲಿ ನಗದು ತೆಗೆದುಕೊಂಡು ಬಂದ ವೇಳೆ ಶರೀಪ್, ಕೃಷ್ಣರೆಡ್ಡಿ, ಇಮ್ರಾನ್ ಸೇರಿದಂತೆ ಕೆಲವರು ಹಣ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಖಾಸಗಿ ಕಾರಿನಲ್ಲಿ ಬಂದ ಮೂವರು ಅಪರಿಚಿತರು ‘ಏನು ನಡೆಯುತ್ತಿದೆ?’ ಎಂದು ಪ್ರಶ್ನಿಸಿ, ನಗದು ಇದ್ದ ಬ್ಯಾಗ್ ಕಿತ್ತುಕೊಂಡು ಕೃಷ್ಣರೆಡ್ಡಿಯನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಒಟ್ಟು 12 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದುವರೆಗೆ 9 ಮಂದಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.