ADVERTISEMENT

ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ, ಮಾತ್ರೆ ಖಾಲಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 9:38 IST
Last Updated 6 ಜೂನ್ 2020, 9:38 IST

ದೊಡ್ಡಬಳ್ಳಾಪುರ: ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎರಡು ತಿಂಗಳಿಂದಲು ಸಹ ದಿನ ನಿತ್ಯ ಬಳಕೆ ಮಾಡುವ ಸಕ್ಕರೆ ಖಾಯಿಲೆ, ಬಿಪಿ ಮತ್ತಿತರೆ ಮಾತ್ರೆಗಳ ಲಭ್ಯತೆ ಇಲ್ಲದೆ ಬಡವರು ಖಾಸಗಿ ಅಂಗಡಿಯಲ್ಲಿ ಖರೀದಿಸುವಂತಾಗಿದೆ ಎಂದು ಕೊನಘಟ್ಟ ಗ್ರಾಮದ ನಿವೃತ್ತ ಎಂಜಿನಿಯರ್‌ ವೆಂಕಟರಮಣಶೆಟ್ಟಿ ದೂರಿದ್ದಾರೆ.

ಅವರು ಈ ಬಗ್ಗೆ ಮಾಹಿತಿ ನೀಡಿ, ಲಾಕ್‌ಡೌನ್‌ ನಂತರ ಗ್ರಾಮೀಣ ಭಾಗದ ರೈತರು ಸೇರಿದಂತೆ ಬಹುತೇಕ ಕಾರ್ಮಿಕರ ಆರ್ಥಿಕ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಇಂತಹ ಸಂದರ್ಭದಲ್ಲಿಯೇ ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಮಾನ್ಯ ದಿನ ಬಳಕೆಯ ಮಾತ್ರೆಗಳು ಸೇರಿದಂತೆ ಎಲ್ಲಾ ರೀತಿಯ ಔಷಧಿಗಳಿಗೆ ಖಾಸಗಿಯವರನ್ನೇ ಅವಲಂಭಿಸುವಂತಾಗಿದೆ. ಕೊರೊನಾ ವೈರಸ್‌ ಸೋಂಕಿನ ಭೀತಿಯಲ್ಲಿ ಕಾಲಕಳೆಯುತ್ತಿರುವ ಗ್ರಾಮೀಣ ಭಾಗದಲ್ಲಿ ಜನ ಸರ್ಕಾರಿ ಆಸ್ಪತ್ರೆಗಳ ಮೇಲೆ ಹೆಚ್ಚು ಅವಲಂಭಿತರಾಗಿದ್ದಾರೆ. ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೂಕ್ತ ಔಷಧಿ, ಮಾತ್ರೆಗಳನ್ನು ಸರಬರಾಜು ಮಾಡದೇ ಇರುವುದು ಖಂಡನೀಯ ಎಂದು ತಿಳಿಸಿದ್ದಾರೆ.

ಮೂರು ದಿನಗಳಲ್ಲಿ ಸರಬರಾಜು:ಲಾಕ್‌ಡೌನ್‌ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಔಷಧಿ, ಮಾತ್ರೆ ಸರಬರಾಜು ಆಗಿರಲಿಲ್ಲ. ಶುಕ್ರವಾರ ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮಂಗಳವಾರದ ಒಳಗೆ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಅಗತ್ಯ ಇರುವ ಔಷಧಿಗಳ ಸರಬರಾಜು ಆಗಲಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಪರಮೇಶ್ವರ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.