ADVERTISEMENT

ರಾಜಕೀಯದಲ್ಲಿ ಯಾರೂ ಶಾಶ್ವತರಲ್ಲ: ನಿಸರ್ಗ ನಾರಾಯಣಸ್ವಾಮಿ

ಜೆಡಿಎಸ್‌ ಸದೃಢವಾಗಿದೆ: ಪಿಳ್ಳಮುನಿಶಾಮಪ್ಪಗೆ ಶಾಸಕ ತಿರುಗೇಟು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 13:45 IST
Last Updated 26 ಸೆಪ್ಟೆಂಬರ್ 2019, 13:45 IST
ನಿಸರ್ಗ ನಾರಾಯಣಸ್ವಾಮಿ
ನಿಸರ್ಗ ನಾರಾಯಣಸ್ವಾಮಿ   

ದೇವನಹಳ್ಳಿ: ‘ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಒಡೆದ ಹಾಲಾಗಿದೆ’ ಎಂದು ಬುಧವಾರ ಸಮಾರಂಭವೊಂದರಲ್ಲಿ ಹೇಳಿಕೆ ನೀಡಿದ್ದ ಪಿಳ್ಳಮುನಿಶಾಮಪ್ಪಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ. ‌

ಶಾಸಕರ ಕಚೇರಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಧೃಡವಾಗಿದೆ. ಅಣ್ಣೇಶ್ವರ ಗ್ರಾಮ ಪಂಚಾಯಿತಿ ತೆರಿಗೆ ಸಂಗ್ರಹ ಕುರಿತು ಪಿಳ್ಳಮುನಿಶಾಮಪ್ಪ ಮಾತನಾಡಿದ್ದಾರೆ. ಗ್ರಾಮ ಪಂಚಾಯಿತಿ ಸ್ಥಳೀಯ ಸರ್ಕಾರವಿದ್ದಂತೆ. ಸರ್ವ ಸದಸ್ಯರ ಸಭೆ ಕರೆದು ಕ್ರಿಯಾ‌ಯೋಜನೆ ರೂಪಿಸಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳವುದು ಗ್ರಾಮ ಪಂಚಾಯಿತಿಯ ಕೆಲಸವೇ ಹೊರತು, ಅದರಲ್ಲಿ ನನ್ನ ಹಸ್ತಕ್ಷೇಪ ಇಲ್ಲ’ ಎಂದರು.

‘ಈವರೆಗೆ ಹೃದಯ ಸಂಬಂಧಿ ಕಾಯಿಲೆಗಳು, ಅಪಘಾತ, ಮೂತ್ರ ಪಿಂಡ ವೈಫಲ್ಯ, ಡಯಾಲಿಸಿಸ್ ರೋಗಿಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹ 68 ಲಕ್ಷ ಅನುದಾನದ ಚೆಕ್ ಅನ್ನು ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ನೀಡಿದ್ದೇನೆ. ನಾನು ಅನುಭವಿ ರಾಜಕಾರಣಿ ಅಲ್ಲದಿದ್ದರೂ ಅನುದಾನ ಯಾವ ಇಲಾಖೆಗೆ ಎಷ್ಟು ಬರುತ್ತದೆ, ಹೆಚ್ಚುವರಿ ಹೇಗೆ ತರಬೇಕು ಎಂಬುದು ಗೊತ್ತಿದೆ’ ಎಂದರು.

ADVERTISEMENT

‘ಶಾಸಕನಾಗುವುದಕ್ಕೆ ಮೊದಲು ರಿಯಲ್ ಎಸ್ಟೇಟ್ ವ್ಯವಹಾರ ಇದ್ದುದು ಸತ್ಯ. ಅದನ್ನು ಶಾಸಕನಾದ ನಂತರ ವ್ಯಾವಹಾರಿಕವಾಗಿ ಬಳಕೆ ಮಾಡುತ್ತಿಲ್ಲ. ರಾಜ್ಯದಲ್ಲಿ ರಾಜಕೀಯ ಕ್ಷಿಪ್ರ ಬೆಳೆವಣಿಗೆಯಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ₹ 120 ಕೋಟಿ ಅಭಿವೃದ್ಧಿ ಕಾಮಗಾರಿಯ ಅನುದಾನ ಬಿಡುಗಡೆಯಾಗಿಲ್ಲ. ಇಲ್ಲ ಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿ‌ಗೆ ಶ್ರಮಿಸುತ್ತಿದ್ದೇನೆ. ಸಲಹೆ ನೀಡಲಿ ಅಭ್ಯಂತರವಿಲ್ಲ’ ಎಂದು ಹೇಳಿದರು.

‘ಪಕ್ಷದ ತತ್ವ ಮತ್ತು ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ‌. ರಾಜಕೀಯದಲ್ಲಿ ಯಾರೂ ಶಾಶ್ವತರಲ್ಲ. ಕಾರ್ಯಕರ್ತರ ಸಲಹೆಗಳಿಗೆ ತಲೆ ಬಾಗುವೆ. ಎಲ್ಲ ಸಮುದಾಯದವರ ಅರ್ಶೀವಾದದಿಂದ ಶಾಸಕನಾಗಿದ್ದೇನೆ. ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.