ADVERTISEMENT

ಕೋಳಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 14:08 IST
Last Updated 10 ಆಗಸ್ಟ್ 2019, 14:08 IST
ನಾಯಿಗಳಿಂದ ಕುರಿಗಳನ್ನು ರಕ್ಷಣೆ ಮಾಡುವಂತೆ ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಅವರಿಗೆ ಕಾಡನೂರು ಗ್ರಾಮದ ನಂದೀಶ್‌ ಮನವಿ ಮಾಡಿದರು
ನಾಯಿಗಳಿಂದ ಕುರಿಗಳನ್ನು ರಕ್ಷಣೆ ಮಾಡುವಂತೆ ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಅವರಿಗೆ ಕಾಡನೂರು ಗ್ರಾಮದ ನಂದೀಶ್‌ ಮನವಿ ಮಾಡಿದರು   

ಕಾಡನೂರು (ದೊಡ್ಡಬಳ್ಳಾಪುರ): ಕಾಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೋಳಿ ಫಾರಂ, ಕೋಳಿ ಅಂಗಡಿಗಳವರು ಎಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಪಡೆಯಿರಿ. ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದಿದ್ದರೆ ತಕ್ಷಣ ಸೂಕ್ತ ಕ್ರಮ ಕೈಗೊಂಡು ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.

ತಾಲ್ಲೂಕಿನ ಕಾಡನೂರು ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಕೋಳಿ ಫಾರಂನಿಂದ ಆಗುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

‘ಗ್ರಾಮದ ಸುತ್ತ ಕೋಳಿ ಫಾರಂಗಳು ಹೆಚ್ಚಾಗಿದ್ದು ರೋಗ ಬಂದು ಸಾವನ್ನಪ್ಪುವ ಕೋಳಿ ಹಾಗೂ ತ್ಯಾಜ್ಯವನ್ನು ಕೋಳಿ ಅಂಗಡಿಯವರು ಕೆರೆ ಅಂಗಳ, ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಕುರಿ ಸಾಕಿಕೊಂಡು ಹೇಗೋ ಜೀವನ ಮಾಡುತ್ತೇವೆ. ನಾಯಿಗಳಿಂದ ನಮ್ಮ ಕುರಿಗಳನ್ನು ರಕ್ಷಿಸಿಕೊಡಿ’ ಎಂದು ಮನವಿ ಮಾಡಿದರು.

ADVERTISEMENT

ಕಾಡನೂರು ಗ್ರಾಮದ ನಂದೀಶ್‌, ‘ನನಗೆ ಒಂದು ಕೈ ಸ್ವಾಧೀನ ಇಲ್ಲ. ಆದರು ಸ್ವಾಭಿಮಾನದಿಂದ ಬದುಕಬೇಕು ಎಂದು ಕುರಿಗಳನ್ನು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ.ಆದರೆ ಗ್ರಾಮದ ಸುತ್ತಲಿನ ಕೆರೆ ಅಂಗಳ, ರಸ್ತೆ ಬದಿಗಳಲ್ಲಿ ಕೋಳಿ ತ್ಯಾಜ್ಯವನ್ನು ರಾತ್ರಿ ವೇಳೆ ತಂದು ಸುರಿಯುತ್ತಿದ್ದಾರೆ’ ಎಂದು ದೂರಿದರು.

‘ತ್ಯಾಜ್ಯ ತಿನ್ನಲು ನೂರಾರು ಸಂಖ್ಯೆಯಲ್ಲಿ ನಾಯಿಗಳು ಬರುತ್ತಿವೆ. ಹೀಗಾಗಿ ಕುರಿಗಳನ್ನು ಬಯಲಿನಲ್ಲಿ ಮೇಯಿಸಲು ಸಾಧ್ಯವೇ ಇಲ್ಲದಾಗಿದೆ. ಯಾವಾಗ ನಾಯಿಗಳು ಬಂದು ಕುರಿಗಳ ಮೇಲೆ ದಾಳಿ ನಡೆಸುತ್ತವೆಯೋ ಎನ್ನುವ ಆತಂಕದಲ್ಲಿಯೇ ಕುರಿಗಳನ್ನು ಕಾಯುವಂತಾಗಿದೆ’ ಎಂದುಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.