ಹೊಸಕೋಟೆ: ತಾಲ್ಲೂಕಿನ ಜಡಿಗೆನಹಳ್ಳಿ ಹೋಬಳಿ ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯರ ಕೊರತೆಯಿಂದ ವೈದ್ಯಕೀಯ ಸೇವೆಗೆ ಹಿನ್ನಡೆಯಾಗಿದೆ.
ಪ್ರತಿನಿತ್ಯ ನೂರಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಾರೆ. ಇಡೀ ಆರೋಗ್ಯ ಕೇಂದ್ರದಲ್ಲಿ 12 ತಾಸಿಗೆ ಒಬ್ಬರಂತೆ ಇಬ್ಬರು ಶುಶ್ರೂಷಕಿಯರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡಬೇಕಾಗುತ್ತದೆ.
ವೈದ್ಯರು ರೋಗಿಗಳನ್ನು ತಪಾಸಣೆ ಮಾಡಿದ ನಂತರ ಅವರಿಗೆ ಚುಚ್ಚುಮದ್ದು ನೀಡುವುದು, ಮಾಹಿತಿ ದಾಖಲಿಸುವುದು, ಒಳರೋಗಿಗಳಿಗೆ ಸಲೈನ್ ಹಾಕುವುದು, ಗರ್ಭಿಣಿಯರ ತಪಾಸಣೆ, ಅಪಘಾತದ ಗಾಯಾಳುಗಳು ಮತ್ತು ಸುಟ್ಟ ಗಾಯಗಳ ರೋಗಿಗಳ ಆರೈಕೆ ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಜವಾಬ್ದಾರಿಗಳನ್ನು ಒಬ್ಬರೇ ನಿರ್ವಹಿಸುವುದು ಕಷ್ಟವಾಗಿದೆ ಎನ್ನುತ್ತಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಜಯಲಕ್ಷ್ಮಿ.
ಚಿಕಿತ್ಸೆ ಪಡೆಯುತ್ತಿರುವ ಹರಳಾಪುರದ ನಾಗರಾಜು ಅವರನ್ನು ಮಾತನಾಡಿಸಿದಾಗ ‘ಆಸ್ಪತ್ರೆ ವೈದ್ಯರು ಚೆನ್ನಾಗಿ ತಪಾಸಣೆ ನಡೆಸುತ್ತಾರೆ. ನರ್ಸ್ಗಳು ಇಲ್ಲದೆ ಸಲೈನ್ ಬಾಟಲ್ ಖಾಲಿಯಾಗಿ ಹತ್ತು ನಿಮಿಷ ಕಳೆದರೂ ಅದನ್ನು ಬದಲಾಯಿಸೋರು ಇಲ್ಲದಂತಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ವೈದ್ಯ, ಲ್ಯಾಬ್ ಟೆಕ್ನಿಷಿಯನ್, ಪಾರ್ಮಾಸಿಸ್ಟ್, ಒಬ್ಬ ‘ಡಿ’ ಗ್ರೂಪ್ ನೌಕರ ಹಾಗೂ ಒಬ್ಬ ಹೊರಗುತ್ತಿಗೆ ‘ಡಿ’ ಗ್ರೂಪ್ ನೌಕರ ಇದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರವು ಗ್ರಾಮದ ಹೊರಗೆ ಕಾರಣ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ನರ್ಸ್ಗಳು ಹಲವಾರು ತೊಂದರೆ ಅನುಭವಿಸುತ್ತಾರೆ. ಕೆಲವೊಮ್ಮೆ ಮದ್ಯವ್ಯಸನಿಗಳು ಮತ್ತು ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸಿದ ಉದಾಹರಣೆಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.