ADVERTISEMENT

ಗೋಮಾಳ ಜಮೀನು ಹರಾಜಿಗೆ ವಿರೋಧ

ದೊಡ್ಡಬಳ್ಳಾಪುರ: ದೊಡ್ಡತುಮಕೂರಿನಲ್ಲಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 3:57 IST
Last Updated 20 ಸೆಪ್ಟೆಂಬರ್ 2020, 3:57 IST
ಗೋಮಾಳ ಜಮೀನು ಹರಾಜು ನಡೆಸದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಗೋಮಾಳ ಜಮೀನು ಹರಾಜು ನಡೆಸದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು   

ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡತುಮಕೂರು ಹಾಗೂ ದೊಂಬರಹಳ್ಳಿ ಗ್ರಾಮದ ಸರ್ಕಾರಿ ಗೋಮಾಳದ ಜಮೀನನ್ನು ತಾಲ್ಲೂಕು ಆಡಳಿತ ಹರಾಜು ಹಾಕಲು ಮುಂದಾಗಿರುವ ಕೈಬಿಡುವಂತೆ ಆಗ್ರಹಿಸಿ ದೊಡ್ಡತುಮಕೂರಿನಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದ ಮುಖಂಡರು ಮಾತನಾಡಿ, ‘ಮಧುರೆ ಹೋಬಳಿಗೆ ಸೇರಿರುವ ದೊಡ್ಡತುಮಕೂರು ಗ್ರಾಮದ ಸರ್ವೆ ನಂ.80ರಲ್ಲಿ 12 ಎಕರೆ ಮತ್ತು ದೊಂಬರಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ 49ರಲ್ಲಿ 5 ಎಕರೆ 15 ಗುಂಟೆ ಸರ್ಕಾರಿ ಗೋಮಾಳವನ್ನು ಹರಾಜು ಹಾಕಲು ಮುಂದಾಗಿರುವುದು ಖಂಡನೀಯ’ ಎಂದರು.

‘ದೊಡ್ಡತುಮಕೂರು ಹಾಗೂ ದೊಂಬರಹಳ್ಳಿ ಗ್ರಾಮದಲ್ಲಿ ಸುಮಾರು 700ಕ್ಕೂ ಹೆಚ್ಚು ಕುಟುಂಬಗಳು ವ್ಯವಸಾಯ ಮೂಲ ಕಸುಬನ್ನಾಗಿಸಿಕೊಂಡು ಹಾಗೂ ಅಧಿಕ ಸಂಖ್ಯೆಯಲ್ಲಿ ಹೈನುಗಾರಿಕೆಯನ್ನು ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಲ್ಲದೆ ಎರಡೂ ಗ್ರಾಮಗಳಲ್ಲಿ ಸಾವಿರಕ್ಕೂ ಹೆಚ್ಚು ಜಾನುವಾರುಗಳಿವೆ. ಇವುಗಳಿಗೆ ಈ ಗೋಮಾಳದಿಂದಲೇ ಮೇವು ದೊರೆ ಯುತ್ತಿದೆ. ಸರ್ಕಾರ ಈ ಜಮೀನುಗಳನ್ನು ಹರಾಜು ಹಾಕಿದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದರು.

ADVERTISEMENT

‘ಸುಮಾರು 2,500ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮಕ್ಕೆ ಜನವಸತಿಗೆ ಯೋಗ್ಯವಾದ ಭೂಮಿಯೂ ಆಗಿರುವುದರಿಂದ ಗ್ರಾಮ ಪಂಚಾಯಿತಿಯಿಂದ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಫಲಾನುಭವಿಗಳಿಂದ ಅರ್ಜಿಯನ್ನು ಸ್ವೀಕರಿಸಿ ಗ್ರಾಮಸಭೆಯಲ್ಲಿ ಅನುಮೋದನೆಗೊಂಡು ಸರ್ಕಾರಕ್ಕೆ ಪ್ರಸ್ತಾವ ಸಹ ಸಲ್ಲಿಕೆಯಾಗಿದೆ. ಈ ಜಮೀನುಗಳ ಹರಾಜು ಪ್ರಕ್ರಿಯೆಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮುಖಂಡರಾದ ವೆಂಕಟೇಶ್‌, ವಸಂತ್‌ಕುಮಾರ್, ಶಿವಕುಮಾರ್, ರಾಮಕೃಷ್ಣಪ್ಪ, ಅಜಯ್, ವೆಂಕಟೇಶ್, ಶ್ರೀರಾಮ್, ನಂಜಪ್ಪ, ಚಂದ್ರನ, ಅಂಜಿನಪ್ಪ, ರಾಘು, ಲೋಕೇಶ್, ಟಿ.ಎಲ್.ವಸಂತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.