ADVERTISEMENT

ಸುಗಮ ಸಂಚಾರಕ್ಕೆ ಜನರ ಸಹಕಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 13:32 IST
Last Updated 22 ಜುಲೈ 2019, 13:32 IST
ವಿಜಯಪುರದಲ್ಲಿ ರಸ್ತೆಗಳಲ್ಲಿ ಇಟ್ಟುಕೊಂಡಿದ್ದ ಅಂಗಡಿಗಳನ್ನು ಕಾನ್‌ಸ್ಟೆಬಲ್‌ಗಳು ತೆರವುಗೊಳಿಸಿದರು
ವಿಜಯಪುರದಲ್ಲಿ ರಸ್ತೆಗಳಲ್ಲಿ ಇಟ್ಟುಕೊಂಡಿದ್ದ ಅಂಗಡಿಗಳನ್ನು ಕಾನ್‌ಸ್ಟೆಬಲ್‌ಗಳು ತೆರವುಗೊಳಿಸಿದರು   

ವಿಜಯಪುರ: ‘ನಗರದಲ್ಲಿ ಸಂಚಾರ ಸಮಸ್ಯೆ ಹೆಚ್ಚಾಗುತ್ತಿದ್ದು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರು ಸಂಚಾರಕ್ಕೆ ಅಡ್ಡಿಯಾಗದಂತೆ ಸಹಕಾರ ನೀಡಬೇಕು’ ಎಂದು ಸಬ್‌ ಇನ್‌ಸ್ಪೆಕ್ಟರ್ ನರೇಶ್‌ ನಾಯಕ್ ಮನವಿ ಮಾಡಿದರು.

ನಗರದ ಬಸ್ ನಿಲ್ದಾಣದ ಸಮೀಪವೂ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ಇಟ್ಟುಕೊಂಡಿರುವ ಅಂಗಡಿಗಳನ್ನು ತೆರವು ಮಾಡುವ ಕಾರ್ಯಾಚರಣೆಯಲ್ಲಿ ಅವರು ಮಾತನಾಡಿದರು.

‘ನಗರದಲ್ಲಿ ನಡೆಯುವಂತಹ ವಾರದ ಸಂತೆಯಂದು ಮಾತ್ರ ಚಿಕ್ಕಬಳ್ಳಾಪುರ ಕೋಲಾರ ಮುಖ್ಯರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿರುವ ಕಾರಣ ಸ್ವಲ್ಪಮಟ್ಟಿಗೆ ಟ್ರಾಫಿಕ್ ಇರುತ್ತದೆ. ಉಳಿದಂತೆ ವೆಂಕಟರಮಣಸ್ವಾಮಿ ದೇವಾಲಯದ ರಸ್ತೆ, ಹಳೇ ಪುರಸಭಾ ಕಾರ್ಯಾಲಯದ ರಸ್ತೆ, ಹಳೇ ಕೆನರಾ ಬ್ಯಾಂಕ್ ರಸ್ತೆ, ಸೇರಿದಂತೆ ವಾಹನ ಸಂಚಾರ ಹೆಚ್ಚಾಗಿರುವ ರಸ್ತೆಗಳಲ್ಲಿ ಅಂಗಡಿಗಳನ್ನು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗದಂತೆ ಹಿಂದೆ ಇಟ್ಟುಕೊಂಡು ಸಹಕಾರ ನೀಡಬೇಕು’ ಎಂದರು.

ADVERTISEMENT

‘ಯಾರಾದರೂ ವ್ಯಾಪಾರದ ಬಂಡಿಗಳನ್ನು ರಸ್ತೆಗಳಿಗೆ ತಂದು ನಿಲ್ಲಿಸಿ, ದ್ವಿಚಕ್ರ ವಾಹನಗಳ ಅಪಘಾತಗಳಾದರೆ ಅಂತಹ ಘಟನೆಗಳಿಗೆ ಅಂಗಡಿಗಳ ಮಾಲೀಕರೇ ನೇರ ಹೊಣೆಗಾರರಾಗುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

‘ದ್ವಿಚಕ್ರ ವಾಹನ ಚಾಲಕರೂ ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರ ಬದಲಿಗೆ ನಿರ್ದಿಷ್ಟ ಸ್ಥಳಗಳಲ್ಲಿ ನಿಲ್ಲಿಸುವ ಮೂಲಕ ಸಂಚಾರಕ್ಕೆ ಅಡ್ಡಿಯಾಗದಂತೆ ಗಮನ ಹರಿಸಬೇಕು. ಎಲ್ಲೆಂದರಲ್ಲಿ ವಾಹನಗಳು ನಿಲ್ಲಿಸುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವವರಿಗೂ ತೊಂದರೆಯಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.