ದೊಡ್ಡಬಳ್ಳಾಪುರ:ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಸಾರಿಗೆ ನೌಕರರು ಬೆಂಗಳೂರಿನಲ್ಲಿ ನಡೆಯುತ್ತಿರುವ ಧರಣಿಗೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಯಾವುದೇ ಬಸ್ಗಳು ರಸ್ತೆಗೆ ಇಳಿಯಲಿಲ್ಲ. ಹಾಗಾಗಿ, ತಾಲ್ಲೂಕಿನಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
‘ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದರ ಸಹಿತ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುರುವಾರ ಸಾವಿರಾರು ಸಂಖ್ಯೆಯಲ್ಲಿ ನೌಕರರು ವಿಧಾನಸೌಧ ಮುತ್ತಿಗೆಗೆ ಯತ್ನಿಸಿದರು. ಆದರೆ, ಅವರನ್ನು ಅರ್ಧದಲ್ಲೇ ತಡೆದ ಪೊಲೀಸರು ಹಲವರನ್ನು ವಶಕ್ಕೆ ಪಡೆದರು. ಧರಣಿ ನಿರತ ನೌಕರರ ಬಂಧನ ಖಂಡಿಸಿ ಶುಕ್ರವಾರ ಕೂಡ ಎಲ್ಲಾ ನಿಗಮಗಳ ಬಂದ್ಗೆ ಕರೆ ನೀಡಲಾಗಿದೆ’ ಎಂದು ಸಾರಿಗೆ ನೌಕರರ ಸಂಘದ ಮುಖಂಡ ಆನಂದ್ ತಿಳಿಸಿದ್ದರು.
ಬಸ್ಗಳು ಇಲ್ಲದೆ ಸಾರ್ವಜನಿಕರಿಗೆ ಅನನುಕೂಲವಾಗಿದ್ದು, ವಿವಿಧ ಪ್ರದೇಶಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಏಕಾಏಕಿ ಬಸ್ ನಿಲ್ಲಿಸಿರುವ ಸಿಬ್ಬಂದಿಗೆ ಹಿಡಿಶಾಪ ಹಾಕಿದರು.
‘ಲಾಕ್ಡೌನ್ ನಂತರ ತಾಲ್ಲೂಕಿನಲ್ಲಿ ಹಂತ ಹಂತವಾಗಿ ಸಾರಿಗೆ ವ್ಯವಸ್ಥೆ ಆರಂಭಿಸಲಾಗುತ್ತಿದ್ದು, 94 ಮಾರ್ಗಗಳ ಪೈಕಿ 80 ಮಾರ್ಗಗಳಲ್ಲಿ ಕಾರ್ಯಾರಂಭವಾಗಿದೆ. ಇಂದು ಬೆಳಿಗ್ಗೆ ಬೆಂಗಳೂರಿಗೆ ನಾಲ್ಕು ಬಸ್ಗಳು ಕಾರ್ಯಾರಂಭ ಮಾಡಲಾಗಿದ್ದು, ಉಳಿದ ಯಾವುದೇ ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿಲ್ಲ. ನೌಕರರಿಗೆ ಕರೆ ಮಾಡಿ ಕರೆಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಡಿಪೊ ವ್ಯವಸ್ಥಾಪಕ ಆನಂದ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.