ದೊಡ್ಡಬಳ್ಳಾಪುರ: ಛಾಯಾಚಿತ್ರ ಪ್ರದರ್ಶನಗಳಲ್ಲಿ ಮಕ್ಕಳ ಚಿತ್ರಗಳು ನೋಡುಗರನ್ನು ಥಟ್ಟನೆ ತಮ್ಮತ್ತ ಸೆಳೆಯುತ್ತವೆ. ಆದರೆ, ಈ ವಿಭಾಗದಲ್ಲಿ ಫೋಟೊಗ್ರಫಿ ಮಾಡುವುದೆಂದರೆ ಹೆಚ್ಚಿನ ಕ್ರಿಯಾಶೀಲತೆ ಮತ್ತು ಹಾಗೆಯೇ ತಾಳ್ಮೆ ಇರಬೇಕಾಗುತ್ತದೆ ಎನ್ನುವುದು ಬಹುತೇಕ ಛಾಯಾಗ್ರಾಹಕರ ಅನಿಸಿಕೆ.
ವನ್ಯಜೀವಿ, ಪ್ರವಾಸಿ, ಗ್ರಾಮೀಣ ಛಾಯಾಚಿತ್ರದಂತೆ ಮಕ್ಕಳ ಛಾಯಾಚಿತ್ರ ವಿಭಾಗದಲ್ಲೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ನಗರದ ಛಾಯಾಗ್ರಾಹಕ ಎಂ.ಎನ್.ರಘುಪತಿ ಪಡೆದಿದ್ದಾರೆ. ಛಾಯಾಗ್ರಹಣವನ್ನೇ ಉದ್ಯೋಗವನ್ನಾಗಿ ಮಾಡುತ್ತಿರುವ ಎಂ.ಎನ್.ರಘುಪತಿ ಕಾರ್ಯಕ್ರಮಗಳ ನಿಮಿತ್ತ ಗ್ರಾಮೀಣ ಭಾಗಕ್ಕೆ ಹೋದಾಗ ಮಕ್ಕಳ ಹತ್ತಾರು ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಮಕ್ಕಳ ಮುಗ್ಧತೆ, ಅವರ ಆಟ– ಪಾಠ, ಅವರ ಕುತೂಹಲವನ್ನು ಬೆನ್ನತ್ತಬೇಕು. ಒಂದೊಂದು ಮಗುವಿನ ಆಲೋಚನೆಯೂ ಒಂದೊಂದು ವಿಶ್ವವಾಗಿರುತ್ತದೆ. ಪ್ರಕೃತಿಯ ಜೊತೆ ಮಕ್ಕಳು ಬೆರೆಯುವಂತೆ ನಾವು ಬೆರೆಯುವುದಿಲ್ಲ. ಪ್ರಕೃತಿಯ ಒಂದೊಂದು ಚಲನೆಗೂ ಅವರಲ್ಲಿ ಹುಟ್ಟುವ ಭಾವಗಳನ್ನು ಸೆರೆ ಹಿಡಿಯುವುದು ತುಂಬ ಖುಷಿಯನ್ನು ನೀಡುತ್ತದೆ ಎಂದು ರಘುಪತಿ ನಗೆ ಬೀರಿದರು.
ಪ್ರಕೃತಿಯ ನಡುವೆ ಗ್ರಾಮೀಣ ಮಕ್ಕಳು ತಮಗೆ ಅರಿವಿಲ್ಲದಂತೆ ಹತ್ತಾರು ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಅದರಲ್ಲೂ ಸಾಕು ಪ್ರಾಣಿಗಳೊಂದಿಗೆ ನಿಕಟವಾದ ನಂಟು ಹೊಂದಿರುವ ಗ್ರಾಮೀಣ ಮಕ್ಕಳ ಚಿತ್ರಗಳನ್ನು ನೆರಳು, ಬೆಳಕಿನ ಹೊಂದಾಣಿಕೆಯೊಂದಿಗೆ ಸೆರೆಹಿಡಿದಾಗ ಹೆಚ್ಚು ಆಕರ್ಷಕವಾಗಿರುತ್ತವೆ. ಪ್ರಾಣಿ, ಪಕ್ಷಿಗಳನ್ನು ಅವುಗಳ ಸಹಜ ಬದುಕಿನೊಂದಿಗೆ ಇರುವಾಗಲೇ ಫೋಟೋ ತೆಗೆಯುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ಮಕ್ಕಳ ಚಿತ್ರಗಳನ್ನು ಸೆರೆ ಹಿಡಿಯುವುದು ಕೂಡ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.