ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿನ ಶ್ರೀಸಾಯಿ ವಿಶ್ವಗುರು ಪೀಠದ ವತಿಯಿಂದ ಸಾಯಿ ಮಂದಿರದಲ್ಲಿ ಜ.1 ರಿಂದ ನಿತ್ಯ ಪೂಜೆ ಹಾಗೂ ಪ್ರಸಾದ ವಿನಿಯೋಗ ಸೇರಿದಂತೆ ಇತರೆ ಸೇವೆಗಳನ್ನು ಆರಂಭಿಸಲಾಗುತ್ತಿದೆ ಎಂದು ಪೀಠದ ಅಧ್ಯಕ್ಷ ವಿಜಯ್ ತಿಳಿಸಿದ್ದಾರೆ.
ಪೀಠದ ವತಿಯಿಂದ ವಿನಯ ಬಾಬ ಮಂದಿರದಲ್ಲಿ ಭಾನುವಾರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ, ವಿನಯ ಬಾಬ ಮಂದಿರದಲ್ಲಿನ ಸಾಯಿಬಾಬ, ಇಚ್ಛಾಗಣಪತಿ, ಜ್ಞಾನದತ್ತಾತ್ರೇಯ, ವಿದ್ಯಾಸರಸ್ವತಿ ದೇವರಿಗೆ ಮಂದಿರದ ಸಂಸ್ಥಾಪಕ ಆಚಾರ್ಯ ವಿನಯ್ ವಿನೇಕರ್ ಸೂಚನೆ ಮೇರೆ ವರ್ಷದ 365 ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸಲು ಶ್ರೀಸಾಯಿ ವಿಶ್ವಗುರು ಪೀಠವನ್ನು ಸ್ಥಾಪಿಸಲಾಗಿದೆ ಎಂದರು.
ಪೀಠದ ಕಾರ್ಯದರ್ಶಿ ಶ್ರೀಧರ್ ಶರ್ಮ ಮಾತನಾಡಿ, ವಿಶ್ವಶಾಂತಿ ಮಂದಿರದಲ್ಲಿ ಪ್ರತಿನಿತ್ಯ ಪೂಜೆ ನಡೆಸಲಾಗುತ್ತಿದೆ. ಜ.1ರಿಂದ ಭಕ್ತಾದಿಗಳ ಸಹಕಾರದೊಂದಿಗೆ ವಿಧಿವತ್ತಾಗಿ ಪೂಜೆ, ಹೋಮ, ಅಭಿಷೇಕ, ಪ್ರಸಾದ ವಿನಯೋಗ ಆಯೋಜಿಸಲಾಗುವುದು. ಪೂಜೆಗೆ ಬೆಂಬಲ ದೊರೆತಿದ್ದು ಜನವರಿ ತಿಂಗಳ ಪೂಜೆಯನ್ನು ಸಂಪೂರ್ಣವಾಗಿ ಕಾಯ್ದಿರಿಸಿದ್ದಾರೆ ಎಂದರು.
ಪೀಠದ ಉಪಾಧ್ಯಕ್ಷ ಎಚ್.ಅಪ್ಪಯ್ಯ ಮಾತನಾಡಿ, ಪೀಠದಿಂದ ಶಾಂತಿಧಾಮವನ್ನು ಮೇಲ್ದರ್ಜೆಗೇರಿಸಿ ದೇವಾಲಯವೆಂದರೆ ಪೂಜಾ ಸ್ಥಳವಷ್ಟೇ ಅಲ್ಲ ಸರ್ವ ಧರ್ಮ ಸಮನ್ವಯ ಸಾಧಿಸುವ ಕ್ಷೇತ್ರವನ್ನಾಗಿಸಲು ಹಲವು ಯೋಜನೆ ರೂಪಿಸಲಾಗಿದೆ. ನವಗ್ರಹ ವನ, ನಕ್ಷತ್ರವನವನ್ನು ಸ್ಥಾಪಿಸಿ ಕ್ಷೇತ್ರಕ್ಕೆ ಪ್ರವಾಸಿಗಳ ಭಕ್ತರ ಆಕರ್ಷಣಿಯ ಸ್ಥಳವನ್ನಾಗಿ ಮಾಡಲಾಗುವುದು. ಮುಂದಿನ ಹಂತವಾಗಿ ಆಚಾರ್ಯ ವಿನಯ ವೇದ ವಿದ್ಯಾ ಗುರುಕುಲ ಸ್ಥಾಪಿಸಿ ಆರ್ಥಿಕ ಹಿಂದುಳಿದ ಮಕ್ಕಳಿಗೆ ಏಳು ವರ್ಷಗಳ ಕಾಲ ಗುರುಕುಲ ವ್ಯಾಸಂಗವನ್ನು ನೀಡಲು ಚಿಂತಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪೀಠದ ನಿರ್ದೇಶಕ ಮಹೇಶ್, ಜಂಟಿ ಕಾರ್ಯದರ್ಶಿ ವಿಭಿನ್, ಮುಖಂಡರಾದ ಪುಟ್ಟಬಸವರಾಜು, ಕುಂಟನಹಳ್ಳಿ ಮಂಜುನಾಥ್, ಸೇವಕ್ ಸಂಸ್ಥೆಯ ಪ್ರತಿನಿಧಿಗಳು ಇದ್ದರು. ಮಾಹಿತಿಗೆ ದೂ: 86605 38065.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.