ವಿಜಯಪುರ:ಪಟ್ಟಣದ ರೂಬಿ ಆಂಗ್ಲ ಪ್ರೌಢಶಾಲಾ ಆವರಣದಲ್ಲಿ ಗುರುವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವಲ್ಲಿ ರಾಷ್ಟ್ರೀಯ ಹಬ್ಬಗಳ ಮಹತ್ವ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ರೂಬಿ ಆಂಗ್ಲ ಪ್ರೌಢಶಾಲೆ ಹಾಗೂ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರೊ.ಬಿ.ಆರ್. ರಾಮಚಂದ್ರೇಗೌಡ, ಪ್ರೊ.ಲೀಲಾ ವಾಸುದೇವ್ ಮತ್ತು ಕಮಲಾಕ್ಷಿ ಸಹೋದರಿಯರ ದತ್ತಿ ಕಾರ್ಯಕ್ರಮವೂ ನಡೆಯಿತು.
ಆಂಗ್ಲ ಶಾಲೆಯ ಕಾರ್ಯದರ್ಶಿ ಸೈಯದ್ ರಫೀಕ್ ಮಾತನಾಡಿ, ಭಾರತವು ಅನೇಕ ಧರ್ಮ ಮತ್ತು ಸಂಸ್ಕೃತಿ ಮೇಳೈಸಿರುವ ವೈವಿಧ್ಯಮಯ ದೇಶವಾಗಿದೆ. ಧರ್ಮ, ಜಾತಿ, ಪ್ರದೇಶದ ಭೇದಭಾವ ಇಲ್ಲದೆ ಎಲ್ಲರೂ ಒಟ್ಟಾಗಿ ರಾಷ್ಟ್ರೀಯ ಹಬ್ಬಗಳನ್ನು ಆಚರಣೆ ಮಾಡುತ್ತಿದ್ದಾರೆ. ಜನರು ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ರಾಷ್ಟ್ರ ಪ್ರಗತಿ ಹೊಂದುತ್ತದೆ ಎಂದರು.
ಬೆಂಗಳೂರಿನ ಗಾಂಧಿ ಭವನದ ಸಂಯೋಜಕ ವಿ. ಪ್ರಶಾಂತ್ ಮಾತನಾಡಿ, ರಾಷ್ಟ್ರೀಯ ಹಬ್ಬಗಳ ಆಚರಣೆಯು ಜನರು, ಯುವಪೀಳಿಗೆಯು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದರು.
ಮುಖ್ಯಶಿಕ್ಷಕಿ ನಿಖತ್ ಸಲ್ಮಾ ಮಾತನಾಡಿ, ರಾಷ್ಟ್ರೀಯ ಹಬ್ಬಗಳು ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಆಚರಿಸುವ ಹಬ್ಬಗಳಾಗಬಾರದು. ಪ್ರತಿ ಮನೆ, ಗ್ರಾಮ, ಪಟ್ಟಣ, ನಗರಗಳಲ್ಲಿ ಎಲ್ಲರೂ ಭೇದಭಾವ ಇಲ್ಲದೆ ಆಚರಿಸುವ ಪ್ರಮುಖ ಹಬ್ಬಗಳಾಗಬೇಕು ಎಂದು ಸಲಹೆ ನೀಡಿದರು.
ಸಹ ಶಿಕ್ಷಕಿ ವೀಣಾ, ಬಿಂಬಿಕಾ ಹಾಜರಿದ್ದರು.ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದಸಫಿಯಾ ಸದಫ್ (ಪ್ರಥಮ),ಮಹಮ್ಮದ್ ಫರ್ ಜಾನ (ದ್ವಿತೀಯ), ಅಲೈನ್ ಜೋಹ್ರಾ(ತೃತೀಯ) ಹಾಗೂ ಎಂ. ವಂದನ(ಸಮಾಧಾನಕರ) ಅವರಿಗೆ ಬಹುಮಾನ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.