ಆನೇಕಲ್ : ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಧಿಕಾರಿಗಳಿಗೆ ಮುಂಬಡ್ತಿ ನೀಡದೆ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಕೃಷ್ಣಮೂರ್ತಿ ತಿಳಿಸಿದರು.
ಅವರು ಪಟ್ಟಣದಲ್ಲಿ ಬಿಎಸ್ಪಿ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಿದ್ದರಾಮಯ್ಯ ಅವರ ಸರ್ಕಾರ ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದೆ. ಅವರು ಭಾಷಣದಲ್ಲಿ ಮಾತ್ರ ಅಹಿಂದ ಬಲ ಎನ್ನುತ್ತಾರೆ. ಆದರೆ, ಕೋಲಾರ ಜಿಲ್ಲೆ ಹೊರತುಪಡಿಸಿ ಎಲ್ಲಿಯೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜಿಲ್ಲಾಧಿಕಾರಿಗಳಿಲ್ಲ. ಇದು ಸಮಾನತೆ ಸಿದ್ಧಾಂತಕ್ಕೆ ವಿರುದ್ಧ ಎಂದು ಟೀಕಿಸಿದರು.
288 ಮಂದಿ ಸಾಮಾನ್ಯ ವರ್ಗದವರನ್ನು ಪದವಿ ಪೂರ್ವ ಕಾಲೇಜಿಗೆ ಪ್ರಾಚಾರ್ಯರಾಗಿ ನೇಮಕ ಮಾಡಲಾಗಿದೆ. ಆದರೆ, ಎಸ್.ಸಿ, ಎಸ್.ಟಿ 80 ಮಂದಿ ಮನವಿ ಸಲ್ಲಿಸಿದ್ದರೂ ಆದೇಶ ಧಿಕ್ಕರಿಸಲಾಗಿದೆ. ಈ ಬಗ್ಗೆ ಶಾಸಕ ನರೇಂದ್ರ ಸ್ವಾಮಿ ಮಾಹಿತಿ ಪರಿಗಣಿಸದೆ ಸರ್ಕಾರ ದಲಿತ ವಿರೋಧಿ ನೀತಿ ತೋರಿದೆ. ತೋಟಗಾರಿಕೆ, ಇಂಧನ, ಕೃಷಿ ಇಲಾಖೆಯಲ್ಲಿಯೂ ಖಾಲಿ ಹುದ್ದೆಗಳ ಭರ್ತಿ ಮಾಡದೆ ವಂಚಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ನಗರಾಭಿವೃದ್ಧಿ ಕಾರ್ಯದರ್ಶಿ ಹುದ್ದೆ ಭರ್ತಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಅನ್ಯಾಯದ ವಿರುದ್ಧ ಬಿಎಸ್ಪಿ ಧ್ವನಿ ಎತ್ತಲಿದೆ ಎಂದರು.
ಬಿಎಸ್ಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ನಾಗರಾಜು ಮಾತನಾಡಿ, ಎಸ್.ಸಿ, ಎಸ್ಟಿ ನೌಕರರಿಗೆ ಬಡ್ತಿ ಮತ್ತು ನೇಮಕಾತಿ ವಿಚಾರದಲ್ಲಿ ಅನ್ಯಾಯವಾಗುತ್ತಿದ್ದರೂ ಮೀಸಲಾತಿಯಡಿಯಲ್ಲಿ ಗೆದ್ದಿರುವ ಶಾಸಕರು ಧ್ವನಿ ಎತ್ತದಿರುವುದು ಖಂಡನೀಯ ಎಂದರು.
ಬಿಎಸ್ಪಿ ಪಕ್ಷದ ಮುಖಂಡರಾದ ಕನಕಪುರ ಕೃಷ್ಣಪ್ಪ, ಸಿ.ಕೆ.ರಾಮು, ಶ್ರೀನಿವಾಸ್, ಯೇಸು ಸುರೇಶ್, ಜಿಗಣಿ ನಂಜಪ್ಪ, ಪ್ರಸನ್ನಕುಮಾರ್, ಚಿಕ್ಕಹಾಗಡೆ ಯಲ್ಲಪ್ಪ, ದೊಡ್ಡಹಾಗಡೆ ಕೃಷ್ಣಪ್ಪ, ಮುನಿರಾಜು, ಮುನಿವೀರಪ್ಪ, ಗೊಲ್ಲಹಳ್ಳಿ ಯಲ್ಲಪ್ಪ, ಆನೇಕಲ್ ಮುಸ್ತಾಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.