ADVERTISEMENT

ಕೊಪ್ಪಳದಲ್ಲಿ ಗೊಂಬೆಗಳ ಕ್ಲಸ್ಟರ್ ಸ್ಥಾಪನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 2:10 IST
Last Updated 7 ಸೆಪ್ಟೆಂಬರ್ 2020, 2:10 IST
ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ಚನ್ನಪಟ್ಟಣ: ಕೊಪ್ಪಳದಲ್ಲಿ ಗೊಂಬೆಗಳ ಕ್ಲಸ್ಟರ್ ಸ್ಥಾಪನೆ ಮಾಡಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಭಾನುವಾರ ಪಟ್ಟಣದಲ್ಲಿ ಬೊಂಬೆಗಳನ್ನು ಪ್ರದರ್ಶಿಸಿ ಪ್ರತಿಭಟಿಸಿದರು.

ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ‘ಸಾವಿರಾರು ಕುಸುರಿ ಕೆಲಸಗಾರರನ್ನು ಚನ್ನಪಟ್ಟಣ ಹೊಂದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಚನ್ನಪಟ್ಟಣದ ಗೊಂಬೆಗಳು ಹೆಸರು ಮಾಡಿವೆ. ಅಂತಹ ಹೆಸರಿರುವ ಚನ್ನಪಟ್ಟಣದಲ್ಲಿ ಗೊಂಬೆ ಕ್ಲಸ್ಟರ್ ಸ್ಥಾಪಿಸದೆ ದೂರದ ಕೊಪ್ಪಳದಲ್ಲಿ ಸ್ಥಾಪಿಸಲು ಹೊರಟಿರುವ ಸರ್ಕಾರದ ಕ್ರಮ ಖಂಡನೀಯ’ ಎಂದರು.


ದಲಿತಪರ ಹೋರಾಟಗಾರ ಮತ್ತೀಕೆರೆ ಹನುಮಂತಯ್ಯ ಮಾತನಾಡಿ, ‘ಗೊಂಬೆ ಕ್ಲಸ್ಟರ್ ಸ್ಥಾಪನೆ ವಿಷಯವಾಗಿ ಇಲ್ಲಿನ ಶಾಸಕರು ದನಿ ಎತ್ತಬೇಕು. ಎಲ್ಲ ಪಕ್ಷದ ಮುಖಂಡರು ಮತ್ತು ಸಂಘಟನೆಗಳು ಜೊತೆಗೂಡಿ ಬೆಂಗಳೂರು ಮೈಸೂರು ಹೆದ್ದಾರಿಯನ್ನು ಬಂದ್ ಮಾಡಿ ಸರ್ಕಾರದ ಗಮನ ಸೆಳೆಯಬೇಕು’ ಎಂದರು.

ADVERTISEMENT

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಯೋಗೇಶ್ ಗೌಡ ಮಾತನಾಡಿ, ‘ದೇಶ ವಿದೇಶಗಳಲ್ಲಿ ನಮ್ಮ ತಾಲ್ಲೂಕಿನ ಬೊಂಬೆಗಳಿಗೆ ಬೇಡಿಕೆ ಇದ್ದು, ಇದೀಗ ಅಂತಹ ಉದ್ಯಮವನ್ನು ಬೇರೆಡೆ ಸ್ಥಾಪಿಸಲು ಮುಂದಾಗಿರುವುದು ಖಂಡನೀಯ’ ಎಂದರು.
ವೇದಿಕೆಯ ಪದಾಧಿಕಾರಿಗಳಾದ ಶ್ರೀಧರ್, ರಂಜಿತ್ ಗೌಡ, ಸೂರಿ, ವೆಂಕಟರಮಣ, ರಾಜಣ್ಣ, ಚಿಕ್ಕಣ್ಣಪ್ಪ, ಶಿವಣ್ಣ, ರಾಂಪುರ ಮಲ್ಲೇಶ್, ಮಂಗಳವಾರಪೇಟೆ ನಾಗೇಶ್, ಉಜ್ಜನಹಳ್ಳಿ ಕೆ.ಪಿ.ರವೀಶ್, ಮಂಗಳವಾರಪೇಟೆ ತಿಮ್ಮರಾಜ್, ಡಿ.ಎಸ್.ಎಸ್. ಸಂಚಾಲಕ ವೆಂಕಟೇಶ್, ಮುಖಂಡರಾದ ನಾಗವಾರ ಶಿವಲಿಂಗೇಗೌಡ, ಕಳಸೇಗೌಡ, ಎಚ್.ಎಂ.ಚಿಕ್ಕಣ್ಣ, ಚಕ್ಕೆರೆ ನಾಗರಾಜ್, ಡಾ.ರಾಜ್ ಕಲಾ ಬಳಗದ ಅಧ್ಯಕ್ಷ ಮಂಜುನಾಥ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ನಾಗಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.