ದೊಡ್ಡಬಳ್ಳಾಪುರ: ಲಾಕ್ಡೌನ್ ಜಾರಿಯಾದ ನಂತರ ನೇಕಾರಿಕೆ ಉದ್ಯಮದಲ್ಲಿ ತೊಡಗಿರುವವರ ಬದುಕು ದುಸ್ತರವಾಗಿದೆ. ನೇಕಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ನಗರದಲ್ಲಿ ನೇಕಾರರು ತಮ್ಮ ಮನೆಗಳ ಮುಂದೆ ಕುಟುಂಬ ಸಮೇತರಾಗಿ ಫ್ಲೇಕಾರ್ಡ್ ಹಿಡಿದು ನಿಂತು ಸರ್ಕಾರದ ಗಮನ ಸೆಳೆಯುವ ಮೂಲಕ ಮೌನ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಮಾಹಿತಿ ನೀಡಿದ ನೇಕಾರರ ಹಿತರಕ್ಷಣಾ ಸಮಿತಿ ಮುಖಂಡ ಪಿ.ಎ.ವೆಂಕಟೇಶ್, ಲಾಕ್ಡೌನ್ ಜಾರಿ ಹಿನ್ನೆಲೆಯಲ್ಲಿ ಯಾವುದೇ ಸಭೆ, ಪ್ರತಿಭಟನೆ ನಡೆಸದಂತೆ ನಿಷೇಧಾಜ್ಞೆ ಇದೆ. ಆದರೆ, ನೇಕಾರರ ಕಷ್ಟಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದ ಮೊದಲುಗೊಂಡು ಆಡಳಿತ, ವಿರೋಧ ಪಕ್ಷದ ಎಲ್ಲಾ ಮುಖಂಡರು, ಅಧಿಕಾರಿಗಳವರೆಗೆ ಮನವಿ ಸಲ್ಲಿಸಿ ಬೇಸತ್ತು ಹೋಗಿದ್ದೇವೆ. ಮನೆಗಳಲ್ಲಿಯೇ ಒಂದೆರಡು ಮಗ್ಗಗಳನ್ನು ಹಾಕಿಕೊಂಡು ಬಟ್ಟೆ ನೇಯ್ದು ಜೀವನ ನಡೆಸುತ್ತಿರುವ ನೇಕಾರರು ಒಂದು ತಿಂಗಳಿಂದ ಕೆಲಸ ಇಲ್ಲದೆ ಬರಿಗೈಯಾಗಿದ್ದಾರೆ. ಆದರೆ, ಸರ್ಕಾರ ಮಾತ್ರ ಇದುವರೆಗೂ ನೇಕಾರರು ಏನಾಗಿದ್ದೀರಿ ಎಂದು ಸೌಜನ್ಯಕ್ಕೂ ವಿಚಾರಿಸಿಲ್ಲ ಎಂದು ದೂರಿದರು.
ಹೀಗಾಗಿ ನಗರದಲ್ಲಿ ನೇಕಾರಿಕೆಯಲ್ಲಿ ತೊಡಗಿರುವ ಪ್ರತಿ ಕುಟುಂಬದವರು ನೇಕಾರಿಕೆ ಉಳಿವಿಗಾಗಿ ಸರ್ಕಾರ ಕೈಗೊಳ್ಳಬೇಕಿರುವ ಒತ್ತಾಯಗಳ ಬರಹದ ಫ್ಲೇಕಾರ್ಡ್ಗಳನ್ನು ಮನೆ ಮುಂದೆಯೇ ಹಿಡಿದು ಸರ್ಕಾರದ ಗಮನ ಸೆಳೆದಿದ್ದೇವೆ ಎಂದರು.
ಪೋಟೊ ಕಳುಹಿಸುವ ಮೂಲಕ ಪ್ರಚಾರ: ನೇಕಾರರ ಬೇಡಿಕೆಗಳನ್ನು ಈಡೇರಿಸುವಂತೆ ಮನೆಗಳ ಮುಂದೆ ಇಡೀ ಕುಟುಂಬದ ಸದಸ್ಯರು ಫ್ಲೇಕಾರ್ಡ್ ಹಿಡಿದುಕೊಂಡು ನಡೆಸಿದ ಮೌನ ಪ್ರತಿಭಟನೆ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಹಾಗೂ ಜವಳಿ ಇಲಾಖೆಯ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳಿಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸುವ ಮೂಲಕ ಪ್ರಚಾರ ನಡೆಸಿದರು. ಹೀಗಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಾಟ್ಸ್ಆ್ಯಪ್ಗಳಿಗೆ ನೇಕಾರರಿಂದ ರಾಶಿ ರಾಶಿ ಪೋಟೊಗಳು ಹೋಗುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.