ದೊಡ್ಡಬಳ್ಳಾಪುರ: ನೇಕಾರ ಸಮ್ಮಾನ್ ಯೋಜನೆ ವಿತರಣೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ನೇಕಾರರು ಕೈಮಗ್ಗ ಮತ್ತು ಜವಳಿ ಇಲಾಖೆ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಅಪೆರಲ್ ಪಾರ್ಕ್ನಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿದ ನೇಕಾರರು, ಸಮರ್ಪಕವಾಗಿ ಯೋಜನೆ ವಿತರಿಸದೆ ನೇಕಾರ್ ಸಮ್ಮಾನ್ ಯೋಜನೆ ದೊರಕುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ವೆಕಾರ್ಯ ನಡೆಸಿರುವ ಅನೇಕರಿಗೆ ನೇಕಾರ ಸಮ್ಮಾನ್ ಯೋಜನೆ ಅನುದಾನ ದೊರೆತಿಲ್ಲ. ಈ ಕುರಿತಂತೆ ಅಧಿಕಾರಿಗಳು ಸೂಕ್ತ ಉತ್ತರ ನೀಡುತ್ತಿಲ್ಲ. ನೇಕಾರರ ಸರ್ವೆ ಇನ್ನೂ ಮುಕ್ತಾಯವಾಗಿಲ್ಲ ಎನ್ನುವ ಉತ್ತರ ನೀಡುತ್ತಿದ್ದಾರೆ. ಇದರಿಂದ ಅನೇಕ ನೇಕಾರರಿಗೆ ಯೋಜನೆಯ ಸೌಲಭ್ಯ ಪಡಯಲು ಅಡ್ಡಿಯಾಗಿದೆ ಎಂದು ಮುಖಂಡರಾದ ಬಿ.ಜಿ.ಹೇಮಂತರಾಜ್, ಗೋವಿಂದರಾಜು ಕಿಡಿಕಾರಿದರು.
ಪ್ರತಿಭಟನಕಾರರಿಗೆ ಉತ್ತರಿಸಿದ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕಿ ಸೌಮ್ಯ ‘ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಆಗದೆ ಇರುವುದು, ಬ್ಯಾಂಕ್ ಖಾತೆ ಚಾಲನೆಯಲ್ಲಿ ಇಲ್ಲದೇ ಇರುವ ಕಾರಣ ಕೆಲ ನೇಕಾರರಿಗೆ ಯೋಜನೆಯ ಹಣ ಪಾವತಿಯಾಗಿಲ್ಲ. ನೇಕಾರರು ಕೆಲಸ ಕಾರ್ಯ ಬಿಟ್ಟಿ ಕಚೇರಿಗೆ ಬರುವುದನ್ನು ತಪ್ಪಿಸಲು ಪ್ರತಿ ವಾರ್ಡ್ಗಳಿಗೆ ತೆರಳಿ ಯೋಜನೆ ತಲುಪದೆ ಇರುವ ನೇಕಾರರ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.