ADVERTISEMENT

ಡಿ. 16ರಂದು ಪ್ರತಿಭಟನೆ: ಚುರುಕುಗೊಂಡ ಪ್ರಚಾರ ಸಭೆಗಳು

ಮಂಚೇನಹಳ್ಳಿ ತಾಲ್ಲೂಕಿಗೆ ತೂಬಗೆರೆ ಹೋಬಳಿ ಸೇರ್ಪಡೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 12:41 IST
Last Updated 10 ಡಿಸೆಂಬರ್ 2019, 12:41 IST
ತೂಬಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಜಾಗೃತಿ ಸಭೆ ನಡೆಸಲಾಯಿತು
ತೂಬಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಜಾಗೃತಿ ಸಭೆ ನಡೆಸಲಾಯಿತು   

ದೊಡ್ಡಬಳ್ಳಾಪುರ: ಹೊಸದಾಗಿ ರಚನೆಯಾಗುತ್ತಿರುವ ಮಂಚೇನಹಳ್ಳಿ ತಾಲ್ಲೂಕಿಗೆ ತೂಬಗೆರೆ ಹೋಬಳಿ ಸೇರ್ಪಡೆ ಮಾಡುತ್ತಿರುವುದರ ವಿರುದ್ಧ ನಡೆಯುತ್ತಿರುವ ಜನ ಜಾಗೃತಿ ಪ್ರಚಾರ ಸಭೆಗಳು ಬಿರುಸುಗೊಂಡಿವೆ.

ಡಿ. 16ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುವ ಬೃಹತ್‌ ಪ್ರತಿಭಟನೆಗೆ ಹೆಚ್ಚಿನ ಜನ ಸೇರುವಂತೆ ಮಾಡುವ ಉದ್ದೇಶದಿಂದ ತೂಬಗೆರೆ ಹೋಬಳಿ ವ್ಯಾಪ್ತಿಗೆ ಸೇರುವ 80 ಗ್ರಾಮಗಳಲ್ಲೂ ಪ್ರಚಾರ ಸಭೆ ನಡೆಸುತ್ತಿರುವ ತೂಬಗೆರೆ ಹೋಬಳಿ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಪಕ್ಷಾತೀತವಾಗಿ ಎಲ್ಲರನ್ನು ಖುದ್ದಾಗಿ ಭೇಟಿ ಮಾಡಿ ಆಹ್ವಾನ ನೀಡುತ್ತಿದ್ದಾರೆ. ಅಲ್ಲದೆ ಪ್ರತಿ ಗ್ರಾಮದಲ್ಲೂ ಸಭೆ ನಡೆಸಿ ತೂಬಗೆರೆ ಹೋಬಳಿ ಮಂಚೇನಹಳ್ಳಿಗೆ ಸೇರ್ಪಡೆಯಾಗುವುದರಿಂದ ಆಗಲಿರುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

ಪ್ರಚಾರ ಸಭೆಗಳ ಕುರಿತು ಮಾಹಿತಿ ನೀಡಿದ ಸಮಿತಿಯ ತಾಲ್ಲೂಕು ಅಧ್ಯಕ್ಷ ರವಿಸಿದ್ದಪ್ಪ, ‘ಡಿ. 16ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್‌ ಪ್ರತಿಭಟನಾ ಸಭೆ ನಡೆಸುವ ಮೂಲಕ ವಿರೋಧವನ್ನು ಅಧಿಕೃತವಾಗಿ ದಾಖಲಿಸಲಾಗುತ್ತಿದೆ. ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಲು ಹೋದಾಗ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ’ ಎಂದರು.

ADVERTISEMENT

‘ಹೋಬಳಿಯನ್ನು ಮಂಚೇನಹಳ್ಳಿ ತಾಲ್ಲೂಕಿಗೆ ಸೇರ್ಪಡೆ ಮಾಡಿದರೆ ಏನೆಲ್ಲ ತೊಂದರೆಗಳು ಉಂಟಾಗಲಿವೆ ಎಂದು ಜನರಿಗೆ ಅರ್ಥವಾಗಿದೆ. ಹಾಗಾಗಿ ಹೋರಾಟಕ್ಕೆ ಜನಬೆಂಬಲ ಉತ್ತಮವಾಗಿದೆ. ಹೋರಾಟ ಸಮಿತಿಯಲ್ಲಿ ಎಲ್ಲ ಪಕ್ಷಗಳ ಮುಖಂಡರು ಇರುವುದರಿಂದ ಇಲ್ಲಿ ಯಾವುದೇ ಗೊಂದಲ ಇಲ್ಲದೆ ಹೋರಾಟ ಯಶಸ್ವಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತೂಬಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಎಂ.ಮುನೇಗೌಡ, ಆರ್‌.ಸತೀಶ್‌, ಟಿ.ಆರ್‌. ಶ್ರೀನಿವಾಸ್‌, ಕಾರ್ಯದರ್ಶಿ ಎಸ್‌.ನಾಗೇನಹಳ್ಳಿ ಎಂ.ಮಂಜುನಾಥ್‌, ಖಜಾಂಚಿ ಟಿ.ಎನ್‌.ಕೃಷ್ಣಪ್ಪ ಸೇರಿದಂತೆ ಸಮಿತಿ ಇತರೆ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.