ಆನೇಕಲ್:ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಬಡವರು ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಸಿಪಿಐ(ಎಂ) ಮುಖಂಡ ಡಿ. ಮಹದೇಶ್
ದೂರಿದರು.
ತಾಲ್ಲೂಕಿನ ಚಂದಾಪುರದಲ್ಲಿ ಸಿಪಿಐ(ಎಂ) ಮತ್ತು ಸಿಐಟಿಯು ಆನೇಕಲ್ ತಾಲ್ಲೂಕು ಸಮಿತಿಯಿಂದ ಬೆಲೆ ಏರಿಕೆ ಖಂಡಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದೆ. ಪ್ರತಿಯೊಂದು ಕುಟುಂಬವೂ ಅವಶ್ಯಕವಾಗಿ ಬಳಸಬೇಕಾದ ಅಡುಗೆ ಅನಿಲ ಸಿಲಿಂಡರ್ ದರ ₹ 1000 ಸಮೀಪದಲ್ಲಿದೆ. ಗಳಿಸಿದ ಆದಾಯದ ಸಂಪೂರ್ಣ ಹಣವನ್ನು ವೆಚ್ಚ ಮಾಡಿದರೂ ಸಾಮಾನ್ಯ ಕುಟುಂಬಗಳು ಜೀವನಕ್ಕಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಆ ಮೂಲಕ ಸಾಮಾನ್ಯರು ನಿರಾಳವಾಗಿ ಜೀವನ ಸಾಗಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಕೂಡಲೇ ರದ್ದುಪಡಿಸಬೇಕು. ಕೇಂದ್ರದ ನೀತಿಗಳಿಂದಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕೈಗಾರಿಕ ಸ್ನೇಹಿ ವಾತಾವರಣ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬೀದಿಬದಿ ವ್ಯಾಪಾರಿಗಳು, ಕಾರ್ಮಿಕರು, ಮುಖಂಡರಾದ ವಿಜಯ್ ಜಾಧವ್, ಪಿ. ಸುರೇಶ್, ಸುನೀಲ್, ಶಿವಕುಮಾರ್, ಮಂಜುನಾಥ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.