ವಿಜಯಪುರ: ತೀವ್ರ ಮಳೆ ಕೊರತೆ ಅನುಭವಿಸುತ್ತಿದ್ದ ರೈತರ ಪಾಲಿಗೆ ಈಗ ಸುರಿಯುತ್ತಿರುವ ಮಳೆಯು ಆತಂಕ ತಂದೊಡ್ಡಿದೆ.
ಮಳೆಯ ಪ್ರಮಾಣ ಹೆಚ್ಚಾಗಿರುವ ಕಾರಣ ಹೊಲದಲ್ಲಿ ಬೆಳೆದಿರುವ ರಾಗಿ ಬೆಳೆ ನೆಲಕಚ್ಚುತ್ತಿದೆ. ಹಾಗಾಗಿ, ರೈತರು ಇಳುವರಿ ಕುಸಿತದ ಆತಂಕ ಎದುರಿಸುತ್ತಿದ್ದಾರೆ.
ಕಳೆದ ವರ್ಷ ಉತ್ತಮ ಮಳೆ ಇಲ್ಲದೆ ಬೆಳೆ ನಷ್ಟ ಅನುಭವಿಸಿದ್ದೆವು. ಈ ಬಾರಿ ಉತ್ತಮ ಮಳೆಯಾಗಿದೆ. ಹಾಗಾಗಿ, ಸಾಲ ಮಾಡಿ ರಾಗಿ ಬಿತ್ತನೆ ಮಾಡಿದ್ದೇವೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ. ಈಗ ಕಾಳು ಕಟ್ಟುತ್ತಿರುವ ರಾಗಿ ಬೆಳೆ ತೂಕ ಹಾಗೂ ತೇವಾಂಶ ಹೆಚ್ಚಾಗಿರುವ ಕಾರಣ ನೆಲಕ್ಕುರುಳಿದೆ. ಹಾಗಾಗಿ, ಬೆಳೆ ನಷ್ಟವಾಗುವ ಭೀತಿ ಎದುರಾಗಿದೆ. ಹಾಕಿದ ಬಂಡವಾಳ ಕೈಗೆ ಬರುತ್ತದೋ, ಇಲ್ಲವೋ ಎನ್ನುವ ಆತಂಕ ಕಾಡಲಾರಂಭಿಸಿದೆ. ರಾಗಿ ಜೊತೆಗೆ ಬಿತ್ತನೆ ಮಾಡಿರುವ ಅಲಸಂದೆ, ಅವರೆ ಬೆಳೆಯೂ ಮಳೆಯಿಂದ ನಷ್ಟಕ್ಕೀಡಾಗುವುವ ಸಾಧ್ಯತೆಯಿದೆ ಎನ್ನುತ್ತಾರೆ ರೈತರು.
‘ಮಳೆ ಬಾರದಿದ್ದರೂ ಸಮಸ್ಯೆ. ಬಂದರೂ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಬಿತ್ತನೆ ಮಾಡಿರುವ ಬೆಳೆಗಳು ಇದೇ ರೀತಿ ನೆಲಕ್ಕುರುಳುತ್ತಿ
ದ್ದರೆ ಕಟಾವಿನ ಸಮಯಕ್ಕೆ ಸರಿಯಾಗಿ ಮೊಳಕೆಯೊಡೆದು ಬೆಳೆ ಕೈಗೆ ಸಿಗದಂತಾಗುತ್ತದೆ. ಈಗ ನೆಲಕಚ್ಚಿರುವ ರಾಗಿ ಬೆಳೆಯನ್ನು ಎತ್ತಿನಿಲ್ಲಿಸಿ, ಕಟ್ಟುಗಳು ಕಟ್ಟುವ ಮೂಲಕ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಈ ಕೆಲಸ ಮಾಡಲಿಕ್ಕೂ ರೈತರು ಕೂಲಿಯನ್ನು ಭರಿಸಲೇಬೇಕು’ ಎನ್ನುತ್ತಾರೆರೈತ ಮುಖಂಡ ಭಟ್ರೇನಹಳ್ಳಿ ನಾರಾಯಣಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.