ವಿಜಯಪುರ: ಹೋಬಳಿಯ ಭೈರಾಪುರದ ಬಳಿ ನಿರ್ಮಾಣ ಮಾಡಿರುವ ಇಂದಿರಾಗಾಂಧಿ ವಸತಿ ಶಾಲೆ ಇದುವರೆಗೂ ಉದ್ಘಾಟನೆ ಆಗಿಲ್ಲ. ಅಲ್ಲದೆ, ಈ ಶಾಲೆಗೆ ಹೋಗಲೂ ವ್ಯವಸ್ಥಿತವಾದ ರಸ್ತೆ ಇಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ವಸತಿ ಶಿಕ್ಷಣ ಸಂಸ್ಥೆಯ ವತಿಯಿಂದ ₹ 15 ಕೋಟಿ ವೆಚ್ಚದಲ್ಲಿ 2018-19ರಲ್ಲಿಆರಂಭವಾಗಿದ್ದ ಕಟ್ಟಡ ಕಾಮಗಾರಿ ಪೂರ್ಣಗೊಂಡು ವರ್ಷವಾಗಿದೆ. ಆದರೂ, ಇದುವರೆಗೂ ಕಟ್ಟಡ ಉದ್ಘಾಟನೆಗೊಂಡಿಲ್ಲ.ಕಳೆದ ಶೈಕ್ಷಣಿಕ ವರ್ಷದಲ್ಲಿ 150 ಮಂದಿ ಮಕ್ಕಳು ಶಾಲೆಗೆ ದಾಖಲಾಗಿದ್ದರು. ಲಾಕ್ ಡೌನ್ ಆರಂಭಕ್ಕೂ ಮುಂಚೆ ಶಾಲೆಗೆ ರಜೆ ಘೋಷಣೆ ಮಾಡಿದ್ದರಿಂದ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಹೋಗಿದ್ದಾರೆ. ಪುನಃ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವ ಮುನ್ನ ಈ ಶಾಲೆಗೆ ಅಗತ್ಯವಾದ ರಸ್ತೆ ನಿರ್ಮಾಣ ಕಾರ್ಯವನ್ನು ಮಾಡಿಕೊಡಬೇಕು.
ಇಲ್ಲಿನ ಕೊಳವೆಬಾವಿಯಲ್ಲಿ ಕೇವಲ 1,500 ಗ್ಯಾಲನ್ ನೀರು ಬರುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನೀರಿನ ಲಭ್ಯತೆ ಸಾಕಾಗುತ್ತಿಲ್ಲ. ವಿಜಯಪುರದ ಕಡೆಯಿಂದ ಕೋರಮಂಗಲ ಮುಖ್ಯರಸ್ತೆಯ ಮೂಲಕ ಸಂಚರಿಸಿ ಶಾಲೆಗೆ ಹೋಗಬೇಕಾದರೆ ಎರಡು ಕಿ. ಮೀ ಹೋಗಬೇಕು. ಸುತ್ತಲೂ ನೀಲಗಿರಿ ಮರಗಳಿವೆ. ಈಗಿರುವ ತಾತ್ಕಾಲಿಕ ರಸ್ತೆಯು ಹಳ್ಳಗಳಿಂದ ಕೂಡಿದೆ. ವಸತಿ ಶಾಲೆಗೆ ಏನಾದರೂ ಖರೀದಿ ಮಾಡಿಕೊಂಡು ಬರಬೇಕಾದರೂ ವಿಜಯಪುರ, ದೇವನಹಳ್ಳಿಗೆ ಹೋಗಬೇಕು. ಮಳೆ ಬಿದ್ದರೆ ಎಲ್ಲಿ ಹೋಗಲೂ ಸಾಧ್ಯವಾಗುವುದಿಲ್ಲ. ವಾಹನ ಸಂಚಾರಕ್ಕೆ ಅನುಕೂಲವಿಲ್ಲ ಎಂದು ಶಾಲಾ ಸಿಬ್ಬಂದಿಯೊಬ್ಬರು ತಿಳಿಸಿದರು.
ಕಟ್ಟಡ ಉದ್ಘಾಟನೆ ಮಾಡಲು ಉಸ್ತುವಾರಿ ಸಚಿವರಿಗೆ ಮನವಿ ಕೊಟ್ಟಿದ್ದೇವೆ. ಅವರು ದಿನಾಂಕ ನಿಗದಿಪಡಿಸಬೇಕು. ಇಲ್ಲಿಗೆ ಭೈರಾಪುರದ ಕಡೆಯಿಂದ ರಸ್ತೆ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿಗೂ ಮನವಿ ಮಾಡಿದ್ದೇವೆ. ನರೇಗಾ ಯೋಜನೆಯಲ್ಲಿ ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಕಟ್ಟಡ ನಿರ್ಮಾಣ, ನಿರ್ವಹಣೆ ಎಲ್ಲವೂ ಕ್ರೈಸ್ಟ್ ಸಂಸ್ಥೆ ನೋಡಿಕೊಳ್ಳುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹನುಮಂತರಾಯಪ್ಪ ತಿಳಿಸಿದರು.
ಪ್ರಾಂಶುಪಾಲ ವೇಣುಗೋಪಾಲ್ ಮಾತನಾಡಿ, ಈ ಹಿಂದೆ ಇದ್ದ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಸ್ಥಳಾವಕಾಶದ ಕೊರತೆಯಿಂದಾಗಿ ಹೊಸ ಕಟ್ಟಡಕ್ಕೆ ಬಂದಿದ್ದೇವೆ. ಉದ್ಘಾಟನೆಗೆ ಶಾಸಕರ ಬಳಿ ಮನವಿ ಮಾಡಿದ್ದೇವೆ. ಅವರು ದಿನಾಂಕ ಕೊಟ್ಟ ಬಳಿಕ ಉದ್ಘಾಟನೆ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.