ಚಿಂತಾಮಣಿ: ಚಿತ್ತೂರು ಜಿಲ್ಲೆಯ ರೋಂಚೆರ್ಲು ಸಮೀಪದ ಚಿಂತಾಮಣಿ-ತಿರುಪತಿ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ತಾಯಿ–ಮಗ ರಸ್ತೆ ಉಬ್ಬಿನಲ್ಲಿ ಬಳಿ ಆಯ ತಪ್ಪಿ ಕೆಳಗೆ ಬಿದ್ದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಸವಾರ ಗಾಯಗೊಂಡಿದ್ದಾರೆ.
ನಗರದ ನಾರಸಿಂಹಪೇಟೆಯ ನಿವಾಸಿ ವೆಂಕಟೇಶ್ ಅವರ ಪತ್ನಿ ಸವಿತ(56) ಮೃತರು. ಆಕೆಯ ಪುತ್ರ ಚಂದನ್ ಗಾಯಗೊಂಡವರು.
ಸವಿತಾ ಅವರು ನಗರದ ಧನುಷ್ ಮಹಿಳಾ ಮಂಡಳಿಯ ಸದಸ್ಯೆಯಾಗಿದ್ದು, ವಿವಿಧ ದೇವಾಲಯಗಳ ಭಜನೆ ಹಾಗೂ ವಿಷ್ಣುಸಹಸ್ರನಾಮ ಪಠಣೆಯಲ್ಲಿ ಭಾಗವಹಿಸುತ್ತಿದ್ದರು. ಶನಿವಾರ ತಿರುಪತಿಯ ದೇವಾಲಯವೊಂದರಲ್ಲಿ ವಿಷ್ಣುಸಹಸ್ರನಾಮ ಪಠಣೆಯಲ್ಲಿ ಭಾಗವಹಿಸಲು ಹಾಗೂ ತಿರುಮಲದಲ್ಲಿ ದರ್ಶನ ಪಡೆಯಲು ತಾಯಿ–ಮಗ ಬೈಕ್ನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ರಸ್ತೆ ಉಬ್ಬಿನಲ್ಲಿ ಬೈಕ್ ಜಿಗಿದಾಗ ಹಿಂಬದಿ ಕುಳಿತಿದ್ದ ಸವಿತ ಆಯ ತಪ್ಪಿ ಕೆಳಗೆ ಬಿದ್ದು, ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ಪೀಲೇರು ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಪೀಲೇರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.
ಭಾನುವಾರ ಮೃತಳ ಪಾರ್ಥಿವ ಶರೀರವನ್ನು ನಗರಕ್ಕೆ ತರಲಾಗಿದ್ದು,ಅವರ ಮನೆಯ ಮುಂದೆ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿತ್ತು. ಮಧ್ಯಾಹ್ನ ನಗರದ ಬೆಂಗಳೂರು ರಸ್ತೆಯ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.