
ಆನೇಕಲ್: ಸಂವಿಧಾನ ಬಾಹಿರ ಹಾಗೂ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಆರ್ಎಸ್ಎಸ್ ಸಂಘಟನೆಯಿಂದ ದಲಿತ ಸಮುದಾಯದ ಕಾರ್ಯಕರ್ತರು ಮತ್ತು ನಾಯಕರು ಹೊರ ಬರಬೇಕು. ಸಮ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯ ಮುಖಂಡ ತಿರುಪಾಳ್ಯ ಮುನಿರಾಜು ಹೇಳಿದರು.
ಆರ್ಎಸ್ಎಸ್ಎಸ್ ಸಂಘಟನೆಯು ಕಾನೂನಿನಡಿ ನೋಂದಣಿಯಾಗಿಲ್ಲ. ಈ ನೆಲದ ಕಾನೂನು ಗೌರವಿಸದ ಸಂಘಟನೆಯಲ್ಲಿ ದಲಿತರು ಇರಬಾರದು. ದೇಶದ ಹಿತ ಕಾಪಾಡಲು ಆರ್ಎಸ್ಎಸ್ನಿಂದ ಸಾಧ್ಯವಿಲ್ಲ. ಹಾಗಾಗಿ ದಲಿತರು ಮತ್ತು ಪ್ರಗತಿಪರರು ಆರ್ಎಸ್ಎಸ್ ಸಂಘಟನೆಯೊಂದಿಗೆ ಗುರುತಿಸಿಕೊಳ್ಳಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದಲಿತ ಸಮುದಾಯಕ್ಕೆ ಭಗವಾನ್ ಬುದ್ಧ, ಜಗತ್ತಿಗೆ ಕಾಯಕ ತತ್ವವನ್ನು ಸಾರಿದ ಬಸವಣ್ಣ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆಗಳು ಆದರ್ಶವಾಗಬೇಕು. ದಲಿತ ಸಮುದಾಯ ಸಂವಿಧಾನದ ಆಶಯದಡಿ ಒಂದಾಗುವ ಮೂಲಕ ಮನುವಾದಿ ಚಿಂತನೆಗಳನ್ನು ತಿರಸ್ಕರಿಸಬೇಕು ಎಂದರು.
ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದ ದಲಿತ ಸಮುದಾಯಕ್ಕೆ ಅಂಬೇಡ್ಕರ್ ಶಿಕ್ಷಣ ಕಲಿಯಲು ಅವಕಾಶ ಮಾಡಿಕೊಟ್ಟರು. ಆದರೆ, ಆರ್ಎಸ್ಎಸ್ ದಲಿತ ಸಮುದಾಯದ ಯುವ ಜನತೆಯ ಕೈಗಳಿಗೆ ದೊಣ್ಣೆಗಳನ್ನು ಕೊಟ್ಟು ಹಿಂಸಾಕೃತ್ಯಕ್ಕೆ ಪ್ರಚೋದಿಸುತ್ತಿದೆ ಎಂದು ಆರೋಪಿಸಿದ ಮುಖಂಡ ಗೌತಮ್ ವೆಂಕಿ, ದಲಿತ ಸಮುದಾಯ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯ ಅಶ್ವತ್ಥ್, ಮುನಿನಾರಾಯಣ್, ರಾಮಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.