ADVERTISEMENT

ಜನರ ಸುರಕ್ಷತೆಗೆ ಮೊದಲ ಆದ್ಯತೆ: ಕೆ.ಜಿ.ರಮೇಶ್‌ ಕುಮಾರ್

ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಹ್ಯಾಮ್ಸ್ ರೇಡಿಯೊ ಸೇವೆ ಅನನ್ಯ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 4:57 IST
Last Updated 1 ಮಾರ್ಚ್ 2021, 4:57 IST
ಆನೇಕಲ್ ತಾಲ್ಲೂಕಿನ ಮುತ್ತೂರಿನಲ್ಲಿ ಏರಿನ್ ಪ್ರತಿಷ್ಠಾನದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯಾಮ್ಸ್ ವತಿಯಿಂದ ಹಮ್ಮಿಕೊಂಡಿದ್ದ ನ್ಯಾಷನಲ್ ಫೀಲ್ಡ್ ಡೇ-2021 ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಆನೇಕಲ್ ತಾಲ್ಲೂಕಿನ ಮುತ್ತೂರಿನಲ್ಲಿ ಏರಿನ್ ಪ್ರತಿಷ್ಠಾನದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯಾಮ್ಸ್ ವತಿಯಿಂದ ಹಮ್ಮಿಕೊಂಡಿದ್ದ ನ್ಯಾಷನಲ್ ಫೀಲ್ಡ್ ಡೇ-2021 ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು   

ಆನೇಕಲ್: ಪ್ರಪಂಚದಲ್ಲಿಯೇ ಮೊದಲ ಸಾಮಾಜಿಕ ಜಾಲತಾಣ ಹವ್ಯಾಸಿ ಹ್ಯಾಮ್‌ ರೇಡಿಯೊ ಆಗಿದೆ. ಈ ಮೂಲಕ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರ ರಕ್ಷಣೆ ಮತ್ತು ನೆರವು ನೀಡುವಲ್ಲಿ ನೂರು ವರ್ಷಗಳ ಇತಿಹಾಸವುಳ್ಳ ಹ್ಯಾಮ್‌ ರೇಡಿಯೊ ಕೆಲಸ ಮಾಡುತ್ತಿದೆ ಎಂದು ಅಮೆಚೂರ್‌ ರೇಡಿಯೊ ಸೊಸೈಟಿ ಆಫ್‌ ಇಂಡಿಯಾ ಅಧ್ಯಕ್ಷ ಕೆ.ಜಿ.ರಮೇಶ್‌ ಕುಮಾರ್‌ ತಿಳಿಸಿದರು.

ಅವರು ತಾಲ್ಲೂಕಿನ ಮುತ್ತೂರಿನಲ್ಲಿ ಏರಿನ್‌ ಪ್ರತಿಷ್ಠಾನದಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹ್ಯಾಮ್ಸ್‌ ವತಿಯಿಂದ ಹಮ್ಮಿಕೊಂಡಿದ್ದ ನ್ಯಾಷನಲ್‌ ಫೀಲ್ಡ್‌ ಡೇ-2021 ಉದ್ಘಾಟಿಸಿ ಮಾತನಾಡಿದರು.

ಯುವಕರಲ್ಲಿ ಹ್ಯಾಮ್ಸ್‌ ಬಗ್ಗೆ ಅರಿವು ಮೂಡಿಸಬೇಕು. ಹಾಗಾಗಿ ತರಬೇತಿ ಕಾರ್ಯಕ್ರಮ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಜಪಾನ್‌ ದೇಶದಲ್ಲಿ 10ಲಕ್ಷಕ್ಕೂ ಹೆಚ್ಚು ಹ್ಯಾಮ್ಸ್‌ಗಳಿದ್ದಾರೆ. ಭಾರತದಲ್ಲಿ ಸುಮಾರು 50ಸಾವಿರ ಹ್ಯಾಮ್ಸ್‌ಗಳಿದ್ದಾರೆ. ಯಾವುದೇ ವಾಣಿಜ್ಯ ಉದ್ದೇಶವಿಲ್ಲದೇ ಸೇವಾ ಮನೋಭಾವನೆ ಮತ್ತು ಜಾಗತಿಕ ಸ್ನೇಹಕ್ಕಾಗಿ ಹ್ಯಾಮ್ಸ್‌ ಜಾಲ ಸೇವೆ ಸಲ್ಲಿಸಲಿದೆ ಎಂದರು.

ADVERTISEMENT

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹ್ಯಾಮ್ಸ್‌ ನಿರ್ದೇಶಕ ಡಾ.ಎಸ್‌.ಸತ್ಯಪಾಲ್‌ ಮಾತನಾಡಿ, ಹ್ಯಾಮ್ಸ್ ಮೂಲಕ ಯುವಕರಲ್ಲಿ ವೈಜ್ಞಾನಿಕ ಚಿಂತನೆ, ಸೇವಾ ಮನೋಭಾವನೆ ಮತ್ತು ಸಂಪರ್ಕ ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆ ತರಬೇತಿ, ಮಾರ್ಗದರ್ಶನ ನೀಡುತ್ತಿದೆ. ಪ್ರತಿ ವರ್ಷ ನ್ಯಾಷನಲ್‌ ಫೀಲ್ಡ್‌ ಡೇ ಅಂಗವಾಗಿ ಯಾವುದೇ ಸೌಲಭ್ಯಗಳಿಲ್ಲದ ದೂರದ ಪ್ರದೇಶದಲ್ಲಿ ಹ್ಯಾಮ್ಸ್‌ ನೆಟ್‌ವರ್ಕ್‌ ಗುರುತಿಸಿ ದೇಶ ವಿದೇಶಗಳೊಂದಿಗೆ ಸಂಪರ್ಕ ಸಾಧಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದರು.

ಭೂಕಂಪ, ಪ್ರವಾಹ, ಸೈಕ್ಲೋನ್‌, ಅಪಘಾತದಂತಹ ಕ್ಲಿಷ್ಟ ಸಂದರ್ಭದಲ್ಲಿ ಹ್ಯಾಮ್ಸ್‌ ಸೇವೆ ಕೆಲಸ ಮಾಡಿದೆ. ಕುಂಭಮೇಳ, ಏಷಿಯನ್‌ ಗೇಮ್ಸ್‌, ನ್ಯಾಷನಲ್‌ ಗೇಮ್ಸ್‌ಗಳಲ್ಲೂ ಕೆಲಸ ಮಾಡಿದೆ. ಕೊರೊನಾ ಸಂದರ್ಭದಲ್ಲಿ ತ್ವರಿತವಾಗಿ ಸಂದೇಶ ರವಾನಿಸಿ ವೈದ್ಯಕೀಯ ಸೌಲಭ್ಯ ದೊರೆಯುವಂತೆ ಮಾಡಲು ಹ್ಯಾಮ್ಸ್‌ ಸ್ವಯಂ ಸೇವಕರು ಕೆಲಸ ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹ್ಯಾಮ್ಸ್‌ ಬಗ್ಗೆ ತರಬೇತಿ ನೀಡುವ ನಿಟ್ಟಿನಲ್ಲಿ ತಾಲ್ಲೂಕಿನ ಎರಿನ್‌ ಪ್ರತಿಷ್ಠಾನ ಮತ್ತು ಸಿಎಸ್‌ಆರ್‌ ಆನೇಕಲ್‌ ಮೂಲಕ ಮುಂಬರುವ ದಿನಗಳಲ್ಲಿ ಕೆಲಸ ಮಾಡಲಿದೆ ಎಂದರು.

ಹ್ಯಾಮ್ಸ್‌ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಗಾಯಕ ಶಶಿಧರ್‌ ಕೋಟೆ, ಸಾಹಿತಿ ಕುಮಾರಸ್ವಾಮಿ, ಎರಿನ್‌ ಪ್ರತಿಷ್ಠಾನದ ಸಾಯಿಪ್ರಕಾಶ್‌, ದಿನಕರನ್‌, ಅತ್ತಿಬೆಲೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ವಿಶ್ವನಾಥ್‌, ಹಲಸೂರು ಗುರುದ್ವಾರದ ಕುಲದೀಪಸಿಂಗ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.