
ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ರೈತರ ಅಹೋರಾತ್ರಿ ಪ್ರತಿಭಟನೆ 168ನೇ ದಿನದಂದು ರೈತ ದಿನ ಆಚರಿಸಲಾಯಿತು
ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ರೈತರ ಅಹೋರಾತ್ರಿ ಪ್ರತಿಭಟನೆ 168ನೇ ದಿನಕ್ಕೆ ಕಾಲಿಟ್ಟಿದ್ದು ಮಂಗಳವಾರ ಪ್ರತಿಭಟನಾ ಸ್ಥಳದಲ್ಲಿ ರೈತ ದಿನಾಚರಣೆ ಆಚರಿಸಲಾಯಿತು.
ರೈತ ಮಹಿಳೆ ಮಂಜುಳ ಸೋಮಶೇಖರ್ ಮಾತನಾಡಿ, 168 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ನಮ್ಮತ್ತ ತಿರುಗಿ ನೋಡದಿರುವುದು ಖಂಡನೀಯ. ರೈತರ ಭೂಮಿಯನ್ನು ಕೈಗಾರಿಕೆಗಳಿಗೆ ನೀಡುವುದರಿಂದ ರೈತರ ಅಸ್ಮಿತೆಗೆ ಧಕ್ಕೆಯಾಗಲಿದೆ. ಸರ್ಕಾರ ರೈತರ ಮೇಲಿನ ಗೌರವದಿಂದಾಗಿ ಕೃಷಿ ಭೂಮಿ ಒತ್ತುವರಿಯನ್ನು ಹಿಂಪಡೆಯಬೇಕು ಎಂದರು.
ಮುಖಂಡ ಚಿನ್ನಪ್ಪ.ವೈ.ಚಿಕ್ಕಹಾಗಡೆ ಮಾತನಾಡಿ, ಬಹುತೇಕ ರಾಜಕಾರಣಿಗಳು ರೈತ ದಿನಾಚರಣೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಇದೇ ರಾಜಕಾರಣಿಗಳು ವಿವಿಧ ಕಾರಣಗಳಿಂದಾಗಿ ರೈತರ ಭೂಮಿ ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದರು.
ಒಂದೆಡೆ ರೈತ ದಿನ ಮತ್ತೊಂದೆಡೆ ರೈತರ ಭೂಮಿ ಕಬಳಿಕೆ ಮಾಡುತ್ತಿರುವುದರಿಂದ ರೈತರ ರಾಜಕಾರಣಿಗಳನ್ನು ನಂಬದ ಸ್ಥಿತಿಯಲ್ಲಿದ್ದಾರೆ. ಚಳಿ ನಡುವೆಯೂ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
ಕೇಶವರೆಡ್ಡಿ, ಹರೀಶ್, ಅಣ್ಣಯ್ಯ, ಉಮಾ ಪರಶುರಾಮ್, ಶ್ರೀನಿವಾಸ್, ಪರಶುರಾಮ್, ಬಸವರಾಜು, ಅಶೋಕ್ ರೆಡ್ಡಿ, ಕೃಷ್ಣಾರೆಡ್ಡಿ, ಭರತ್, ಸುರೇಶ್, ರಾಮು, ಚೇತನ್, ಶಾಮಲಾ, ಲಕ್ಷ್ಮಮ್ಮ, ಸರಿತಾ, ವೆಂಕಟಸ್ವಾಮಿರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.