ದೊಡ್ಡಬಳ್ಳಾಪುರ: ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದವರು. ಸಮಾಜದ ಅಂಚಿನ ಸಮುದಾಯದಿಂದ ಬಂದವರು. ಇಂತಹ ವಿದ್ಯಾರ್ಥಿಗಳ ಶಿಸ್ತು ಸಂತಸವಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್.ಗೌಡ ಹೇಳಿದರು.
ಅವರು ನಗರದ ಬೆಸೆಂಟ್ ಪಾರ್ಕ್ನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆರಂಭವಾದ ಕಬ್ಸ್ ಮತ್ತು ಬುಲ್ ಬುಲ್ಸ್ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ಕಬ್ಸ್ ಮತ್ತು ಬುಲ್ ಬುಲ್ಸ್ ಶಿಬಿರವು ವ್ಯಕ್ತಿತ್ವ ವಿಕಾಸಕ್ಕೆ ಅವಕಾಶ ನೀಡುತ್ತದೆ. ನಮ್ಮ ರಾಜ್ಯದಲ್ಲಿ ಸ್ಕೌಟ್ ಮತ್ತು ಗೈಡ್ಸ್ ವ್ಯಾಪಕವಾಗಿ ಬೆಳೆಯುತ್ತಿದ್ದು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದರು.
ಪ್ರಗತಿಪರ ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಮಾತನಾಡಿ, ‘ಆಹಾರ, ನೀರು ನಮಗೆ ನಿತ್ಯ ಬೇಕಾದ ಅಮೂಲ್ಯವಾದ ಜೀವ ಪೋಷಕ ವಸ್ತುಗಳು. ಇವುಗಳನ್ನು ವ್ಯರ್ಥವಾಗಿ ದುಂದು ಮಾಡಬಾರದು. ದ.ರಾ.ಬೇಂದ್ರೆ ಅವರು ಆಹಾರವನ್ನು ಅನ್ನಬ್ರಹ್ಮ ಎಂದು ಕರೆದಿದ್ದಾರೆ. ಆದ್ದರಿಂದ ನಾವು ಆಹಾರವನ್ನು ವ್ಯರ್ಥವಾಗಿ ಚೆಲ್ಲಬಾರದು. ಶಿಬಿರಕ್ಕೆ ಬಂದಿರುವುದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು. ನಾವು ಒಳ್ಳೆಯವರಾದರೆ ಅದು ನಮಗೆ ಗೌರವ, ತಂದೆ ತಾಯಿಯವರಿಗೆ ನೆಮ್ಮದಿ, ಸಮಾಜಕ್ಕೆ ಹಿತ’ ಎಂದರು.
ಬಿಬಿಎಂಪಿ ಸ್ಕೌಟ್ಸ್ ಮತ್ತು ಗೈಡ್ಸ್ ನೋಡಲ್ ಅಧಿಕಾರಿ ಎಂ.ಎ.ಚಲ್ಲಯ್ಯ, ರಾಜ್ಯ ತರಬೇತಿ ಸಹಾಯಕ ಆಯುಕ್ತರಾದ ಅರುಣಮಾಲಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.