ದೊಡ್ಡಬಳ್ಳಾಪುರ: ಇಲ್ಲಿನ ಶಿಲ್ಪಿ ಶಿವಕುಮಾರ್ ಆಚಾರ್ ಅವರಿಗೆ ರಾಜ್ಯ ಶಿಲ್ಪಕಲಾ ಅಕಾಡೆಮಿಯ 2018ನೇ ಸಾಲಿನ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಕಲಾಕೃತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಮಾ.ಅರ್ಕಸಾಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ₹ 25 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿದೆ.
ದೊಡ್ಡಬಳ್ಳಾಪುರದ ಸಂಜಯನಗರದ ನಿವಾಸಿ ಶಿವಕುಮಾರ್ ಆಚಾರ್ ಲೋಹದ ವಿಗ್ರಹಗಳನ್ನು ಸಿದ್ದಪಡಿಸುವಲ್ಲಿ ನಿಪುಣರಾಗಿದ್ದಾರೆ. ಶಿವಕುಮಾರ್ ಆಚಾರ್ ಅವರ ನರಸಿಂಹ ವಿಗ್ರಹಕ್ಕೆ ಕಲಾಕೃತಿ ಪ್ರಶಸ್ತಿ ದೊರೆತಿದೆ. ಇವರ ನರಸಿಂಹ, ಮತ್ಸ್ಯ, ವಿಷ್ಣು, ಅಷ್ಟಲಕ್ಷ್ಮೀ, ಗಣೇಶ ಸೇರಿದಂತೆ ಹಲವು ದೇವತಾ ವಿಗ್ರಹಗಳು ರಾಜ್ಯದ ವಿವಿಧೆಡೆ ಹಾಗೂ ಬೇರೆ ರಾಜ್ಯಗಳಿಗಲ್ಲಿಯೂ ಪ್ರದರ್ಶನ ಮತ್ತು ಮಾರಾಟವಾಗಿವೆ. ಕಾವೇರಿ ಎಂಪೋರಿಯಂ ಕಲಾ ಪ್ರದರ್ಶನದಲ್ಲಿ ಇವರ ಕಲಾಕೃತಿಗಳು ಪ್ರದರ್ಶಿತವಾಗಿವೆ.
ಹುಬ್ಬಳಿಯ ಜೈನ ಮಂದಿರಕ್ಕೆ ನೀಡಿರುವ 150 ಕೆಜಿ ತೂಕದ ಪಾರ್ಶ್ವನಾಥ ವಿಗ್ರಹ ಹಾಗೂ ತಮಿಳುನಾಡಿನ ತಿರುಚಂದೂರಿನ ವೇದವ್ಯಾಸ ವಿಗ್ರಹ ಇವರ ಕಲಾನೈಪುಣ್ಯತೆಗೆ ಮೆರುಗು ನೀಡಿವೆ. ಹಲವು ದೇವಾಲಯಗಳಿಗೆ ಹಾಗೂ ಎಂಪೋರಿಯಂನಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಲೋಹದ ವಿಗ್ರಹಗಳನ್ನು ಮಾಡಿಕೊಟ್ಟಿರುವ ಶಿವಕುಮಾರ್ ಅವರ ಕಲಾಭಿರುಚಿಗೆ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಸಂದಿರುವುದಕ್ಕೆ ತಾಲ್ಲೂಕಿನ ವಿವಿಧ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.